ಪಾಲಕ್ಕಾಡ್: ಮನುಷ್ಯರು ಮಾಡಿದ ಪಾಪದ ದುಷ್ಪರಿಣಾಮದಿಂದಾಗಿ ಕೊರೋನಾ ಎಂಬ ಮಹಾ ಪಿಡುಗು ಮನುಷ್ಯ ರಾಶಿಯನ್ನೇ ಬಲಿತೆಗೆದು ಕೊಳ್ಳುತ್ತಿದೆ. ಆದರೂ ಮನುಷ್ಯರೆನಿಸಿದ ರಾಕ್ಷಸೀಯರು ತಮ್ಮ ಪಾಪ ಕೃತ್ಯವನ್ನು ಮುಂದುವರಿಸುತ್ತಲೇ ಇದ್ದಾರೆ. ಇದಕ್ಕೊಂದು ಉದಾಹರಣೆ ಕೇರಳದಲ್ಲಿ ನಡೆದಿದೆ.
ಏನೂ ಅರಿಯದ ಮುಗ್ಧ ಕಾಡಾನೆ ಅವಳು… ಹೊಟ್ಟೆಯಲ್ಲಿ ಕಂದ ಉಸಿರು ಪಡೆದಿದ್ದ ಸಂಭ್ರಮದಲ್ಲಿದ್ದಳು… ಇದೇ ತಾಯ್ತನದ ಖುಷಿಯಲ್ಲಿ ಆಹಾರವನ್ನು ಹುಡುಕುತ್ತಾ ಊರಿನತ್ತ ಹೆಜ್ಜೆ ಇಟ್ಟಿದ್ದ ಆ ಅಮಾಯಕಿ ನರಳಿ ನರಳಿ ಜೀವ ಬಿಡಬೇಕಾಯಿತು…! ಕಾರಣ, ಕಲ್ಲು ಹೃದಯದ ರಕ್ಕಸರ ಪಾಪಕೃತ್ಯ…!
ಕೇರಳದ ಮಲಪ್ಪುರಂನಲ್ಲಿ ಕಾಡಾನೆಯೊಂದನ್ನು ಭೀಕರವಾಗಿ ಕೊಲ್ಲಲಾಗಿದೆ. ಆಹಾರ ಹುಡುಕಿಕೊಂಡು ಬಂದಿದ್ದ ಈ ಗರ್ಭಿಣಿ ಕಾಡಾನೆಗೆ ಅನನಾಸು ಹಣ್ಣಿನಲ್ಲಿ ಸಿಡಿಮದ್ದು ಇಟ್ಟು ತಿನ್ನಲು ನೀಡಿದ ಜನ ಅದರ ಸಾವಿಗೆ ಕಾರಣರಾಗಿದ್ದಾರೆ. ಈ ಬರ್ಬರ ಹತ್ಯೆ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾಣಿಪ್ರಿಯರು ಈ ರಕ್ಕಸೀಕೃತ್ಯವನ್ನು ಖಂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲೂ ಈಗ ಇದೇ ಚರ್ಚೆ ನಡೆಯುತ್ತಿದೆ. ಮಾನವೀಯತೆಯನ್ನೇ ಮರೆತ ಜನರ ಈ ಕೃತ್ಯವನ್ನು ವಿರೋಧಿಸಿದ ಎಲ್ಲರೂ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಒತ್ತಾಯಿಸಿದ್ದಾರೆ.
ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡ ಬಳಿಕ ಗಾಯಗೊಂಡಿದ್ದ ಆನೆ ವೆಲ್ಲಿಯೂರ್ ನದಿಯಲ್ಲಿ ಹೋಗಿ ನಿಂತಿತ್ತು. ಈ ವಿಷಯ ಅರಣ್ಯಾಧಿಕಾರಿಗಳಿಗೆ ತಿಳಿದಿತ್ತು. ಆದರೆ, ಆನೆಯನ್ನು ಉಳಿಸುವ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗದೆ ಇವಳು ಅಲ್ಲೇ ಕೊನೆಯುಸಿರೆಳೆದಿದ್ದಳು. ಈ ರಕ್ಷಣಾ ತಂಡದಲ್ಲಿದ್ದ ಮೋಹನ್ ಕೃಷ್ಣನ್ ಎಂಬ ಅಧಿಕಾರಿ ನೋವಿನಿಂದ ಈ ಘಟನೆಯ ಬಗ್ಗೆ ವಿವರಿಸಿದ ಬಳಿಕವೇ ಈ ರಕ್ಕಸೀಕೃತ್ಯ ಬೆಳಕಿಗೆ ಬಂದಿದ್ದು.
ನಿಜ… ಕಾಡಾನೆಗಳು ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುವಾಗ ನೋವಾಗುತ್ತದೆ. ಹಾಗಂತ, ಅವುಗಳನ್ನು ಕೊಂದು ಗಹಗಹಿಸುವುದು ಮನುಷ್ಯರು ಮಾಡುವ ಕೆಲಸವಲ್ಲ… ಅದಕ್ಕೆಂದು ಅರಣ್ಯ ಇಲಾಖೆ ಇದೆ. ಅವರಿಗೆ ಮಾಹಿತಿ ಕೊಟ್ಟು ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬಹುದಾಗಿತ್ತು.
ಅದಕ್ಕಿಂತ ಹೆಚ್ಚಾಗಿ ಬಹುತೇಕ ಕಡೆಗಳಲ್ಲಿ ಆನೆಗಳು ಸೇರಿದಂತೆ ವನ್ಯಜೀವಿಗಳು ವಾಸಿಸುವ ಜಾಗವನ್ನು ಆಕ್ರಮಿಸಿ ನಾವು ಬದುಕುತ್ತಿದ್ದೇವೆ ಎಂಬುದು ಕೂಡಾ ಅಷ್ಟೇ ಸತ್ಯ… ಪಾಪ… ಅವುಗಳು ಪ್ರಾಣಿಗಳು, ಅವುಗಳಿಗೂ ಬದುಕು ಎಂಬುದಿರುತ್ತದೆ. ನಮ್ಮಂತೆ ಪ್ರಾಣಿಗಳಿಗೂ ಭೂಮಿ ಮೇಲೆ ಬದುಕುವ ಹಕ್ಕು ಇರುತ್ತದೆ… ಇದನ್ನು ಅರಿಯದೆ ಹೀಗೆ ಆಹಾರದ ಆಸೆ ತೋರಿಸಿ ನರಳಿ ನರಳಿ ಸಾಯುವಂತೆ ಮಾಡುವುದು ಎಷ್ಟು ಸರಿ…? ಖಂಡಿತಾ ಇದು ಅಕ್ಷಮ್ಯ ಅಪರಾಧ… ಇದೇ ಕಾರಣಕ್ಕೆ ಈಗ ಜನ ಒಕ್ಕೊರಳಿನಿಂದ ಆನೆ ಹಂತಕರ ವಿರುದ್ಧ ಸಿಡಿದೆದ್ದಿದ್ದಾರೆ.






