janadhvani

Kannada Online News Paper

ನಿರ್ಭಯಾ ಹಂತಕರು ಮಾ. 3ರಂದು ನೇಣುಗಂಬಕ್ಕೆ: ಮತ್ತೊಂದು ಮಹೂರ್ತ ನಿಗದಿ

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ನೇಣುಗಂಬಕ್ಕೆ ಏರಿಸಲು ಮತ್ತೊಮ್ಮೆ ಮುಹೂರ್ತ ನಿಗದಿಯಾಗಿದೆ.ನಿರ್ಭಯಾ ಹಂತಕರ ಕಾನೂನು ಹೋರಾಟದ ನಾಟಕಗಳ ನಂತರ ಈಗ ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿದೆ. ಮಾರ್ಚ್‌ 3ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಆರೋಪಿಗಳನ್ನೂ ನೇಣುಗಂಬಕ್ಕೇರಿಸಲು ಡೆತ್‌ ವಾರಂಟ್‌ ಜಾರಿ ಮಾಡಲಾಗಿದೆ.

ಅಪರಾಧಿಗಳಾದ ಮುಖೇಶ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಮತ್ತು ಅಕ್ಷಯ್‌ಕುಮಾರ್‌ ಸಿಂಗ್‌ಗೆ (31) ಡೆತ್‌ ವಾರಂಟ್‌ ಜಾರಿಗೊಳಿಸಲಾಗಿದೆ.
ನ್ಯಾಯಾಲಯದ ತೀರ್ಪಿನ ಕುರಿತು ನಿರ್ಭಯಾ ತಾಯಿ ಆಶಾದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ದಿನಾಂಕ ನಿಗದಿ ಮಾಡಿದ್ದು ಸಮಾಧಾನ ತಂದಿದೆ. ಆದರೆ ಈ ಬಾರಿಯಾದರೂ ಇದು ಜಾರಿಯಾಗುತ್ತದಾ ಇಲ್ಲವಾ ಎಂಬ ಸಂಶಯ ಸ್ವಲ್ಪ ಮಟ್ಟಿಗೆ ಈಗಲೂ ಇದೆ. ಆದರೆ ನ್ಯಾಯ ಈಗಲಾದರೂ ನಮಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ ಎಂದು ಆಶಾದೇವಿ ನ್ಯಾಯಾಲಯದ ಆವರಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೇರಿಸಲಾಗುತ್ತದೆ. ನಿರ್ಭಯಾ ಅಪರಾಧಿಗಳಿಗೆ ನೇಣು ಕುಣಿಕೆ ಬಿಗಿಯುವ ಮುನ್ನ ಗಲ್ಲಿಗೇರಿಸುವ ‘ಡಮ್ಮಿ ಪ್ರಕ್ರಿಯೆ’ ನಡೆಯಲಿದೆ. ಈಗಾಗಲೇ ತಿಹಾರ್‌ ಜೈಲಿನಲ್ಲಿ ಒಮ್ಮೆ ಡಮ್ಮಿ ಪ್ರಕ್ರಿಯೆ ಕೂಡ ನಡೆಸಲಾಗಿತ್ತು.