janadhvani

Kannada Online News Paper

ಜಾತಿ ತಾರತಮ್ಯ: 3 ಸಾವಿರಕ್ಕೂ ಹೆಚ್ಚು ದಲಿತರು ಸಾಮೂಹಿಕವಾಗಿ ಇಸ್ಲಾಂ ಧರ್ಮಕ್ಕೆ

ಚೆನ್ನೈ, ಡಿಸೆಂಬರ್ 26: ಹಿಂದು ಧರ್ಮದಲ್ಲಿನ ಜಾತಿ ತಾರತಮ್ಯಕ್ಕೆ ನೊಂದು, ಹಾಗೂ ಸರ್ಕಾರದ ತಾರತಮ್ಯ ನೀತಿಗೆ ನೊಂದು ಸಾವಿರಾರು ಮಂದಿ ರೈತರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸಿದ್ದಾರೆ.

ತಮಿಳುನಾಡಿನ ಮೆಪ್ಪುಪಾಲಯಂ ನ ಮೂರು ಸಾವಿರಕ್ಕೂ ಹೆಚ್ಚು ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುತ್ತಿರುವುದಾಗಿ ಘೋಷಿಸಿವೆ. ‘ತಮಿಳ್ ಪುಲಿಗಲ್’ ಸಂಘಟನೆಯ ವಾರ್ಷಿಕ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಈ ಮತಾಂತರಕ್ಕೆ ಹಿಂದು ಧರ್ಮದಲ್ಲಿನ ಜಾತಿ ತಾರತಮ್ಯ ಮತ್ತು ಡಿಸೆಂಬರ್ 2 ರಂದು ಮೆಟ್ಟುಪಾಲ್ಯಂ ಬಳಿಯ ನಡೂರಿನಲ್ಲಿ ದಲಿತರ ಮನೆ ಮೇಲೆ ಗೋಡೆ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂಬುದು ಸಹ ಇಸ್ಲಾಂ ಧರ್ಮ ಮತಾಂತರಕ್ಕೆ ಪ್ರಮುಖ ಕಾರಣ.

ಜನವರಿ ಐದರಂದು ಮೆಟ್ಟುಪಾಲ್ಯಂ ನ ವಿವಿಧ ಗ್ರಾಮಗಳು, ಪಟ್ಟಣಗಳ ದಲಿತರು ಸಾಮೂಹಿಕವಾಗಿ ಇಸ್ಲಾಂ ಧರ್ಮ ಸೇರುವುದಾಗಿ ಪ್ರಕಟಿಸಿದ್ದಾರೆ.

ಡಿಸೆಂಬರ್ 2 ರಂದು ಸುರಿದ ಮಳೆಗೆ ಮೆಟ್ಟುಪಾಲ್ಯಂ ನಡೂರು ಗ್ರಾಮದಲ್ಲಿ ಹದಿನೈದು ಅಡಿ ಎತ್ತರದ ಕಾಂಪೌಂಡ್ ಒಂದು ಕುಸಿದು 10 ಮಹಿಳೆ, ಇಬ್ಬರು ಮಕ್ಕಳು ಸೇರಿ ಹದಿನೇಳು ಮಂದಿ ಮರಣ ಹೊಂದಿದ್ದರು.

ಆ ಗೋಡೆಯನ್ನು ದಲಿತರ ಕೇರಿಗೆ ಅಡ್ಡಲಾಗಿ ಕಟ್ಟಲಾಗಿತ್ತು. ದಲಿತರು ತಮ್ಮ ಮನೆಯ ಅಂಗಳ ಪ್ರವೇಶಿಸದಿರಲೆಂದೇ ಮನೆಯ ಮಾಲೀಕ ಗೋಡೆ ಕಟ್ಟಿಸಿದ್ದ, ನಂತರ ಆತನನ್ನು ಪೊಲೀಸರು ಬಂಧಿಸಿದರು. ಆತ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ನಿರ್ಣಯ ಕೈಗೊಂಡಿದ್ದಾರೆ.