janadhvani

Kannada Online News Paper

ಪೋಲೀಸ್ ಫೈರಿಂಗ್: ಇಬ್ಬರು ಬಲಿ, ಮಾಜಿ ಮೇಯರ್ ಅಶ್ರಫ್ ಸಹಿತ ಹಲವರಿಗೆ ಗಾಯ

ಮಂಗಳೂರು, ಡಿ.19:ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ಸಂದರ್ಭ ಬಂದರ್ ಸಮೀಪ ಪೊಲೀಸರ ಗುಂಡಿಗೆ ಖಂದಕ್ ನಿವಾಸಿ ಜಲೀಲ್-(43) ಹಾಗೂ ನೌಶೀನ್ ಕುದ್ರೋಳಿ-(23) ಇಬ್ಬರು ಬಲಿಯಾಗಿದ್ದಾರೆ

ಒಬ್ಬರ ಕಣ್ಣಿಗೆ ಗುಂಡೇಟು ಬಿದ್ದಿದ್ದರೆ, ಮತ್ತೊಬ್ಬರ ಬೆನ್ನಿಗೆ ಗುಂಡು ಬಿದ್ದಿದೆ ಎಂದು ತಿಳಿದುಬಂದಿದೆ. ಇಬ್ಬರನ್ನೂ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಇಬ್ಬರೂ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೃತಪಟ್ಟ ಒಬ್ಬರು ಬಂದರ್ ನಿವಾಸಿ, ಮತ್ತೊಬ್ಬರು ಕಂದಕ್ ನಿವಾಸಿ ಎಂದು ತಿಳಿದುಬಂದಿದೆ.ಮಾಜಿ ಮೇಯರ್ ಕೆ. ಅಶ್ರಫ್ ಸಹಿತ ಹಲವರು ಗಂಭೀರ ಗಾಯಗೊಂಡಿದ್ದು, ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ಉದ್ರಿಕ್ತ ವಾತಾವರಣ ಕರ್ಫ್ಯೂ ಜಾರಿ:

ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಇಂದು ಮಧ್ಯಾಹ್ನ ಆರಂಭಗೊಂಡ ಪ್ರತಿಭಟನೆ ಇನ್ನೂ ನಿಯಂತ್ರಣಕ್ಕೆ ಬಾರದೆ ಅಲ್ಲಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದಾರೆ. ಪ್ರತಿಭಟನಕಾರರು ಕಲ್ಲುತೂರಾಟ ನಡೆಸಿದ್ದು, ಸ್ಟೇಟ್ ಬ್ಯಾಂಕ್ ಸುತ್ತಮುತ್ತಲ ಪರಿಸರದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದೆ. ನೆಲ್ಲಿಕಾಯಿ ರಸ್ತೆಯಲ್ಲಿ ಪ್ರತಿಭಟನಕಾರರು ಟಯರ್ ಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನಕಾರರನ್ನು ಬಂಧಿಸಲು ಈಗಾಗಲೇ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ನಡುವೆ ಟೌನ್ ಹಾಲ್ ಬಳಿ ಪ್ರತಿಭಟನಕಾರರು ಜಮಾಯಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪಂಪ್ ವೆಲ್ ನಿಂದ ಸ್ಟೇಟ್ ಬ್ಯಾಂಕ್ ಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಿಎಎ ವಿರುದ್ಧದ ಪ್ರತಿಭಟನೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಂಗಳೂರು ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪಿ. ಎಸ್. ಹರ್ಷಾ ತಿಳಿಸಿದ್ದಾರೆ.

ಬಂದರ್, ಕದ್ರಿ, ಬರ್ಕೆ, ಉರ್ವ, ಪಾಂಡೇಶ್ವರ ಪ್ರದೇಶಗಳು ಈ ವಲಯದಲ್ಲಿದೆ.