ಮಂಗಳೂರು: ಉದ್ಯೋಗ ಅರಸಿ ಏಜೆನ್ಸಿಯೊಂದರ ಮೂಲಕ ಕುವೈತ್ಗೆ ತೆರಳಿ, ಅಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರಿನ 35 ಯುವಕರ ಗುಂಪು ಸಹಾಯಕ್ಕಾಗಿ ಮೊರೆ ಇಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಜನವರಿ ತಿಂಗಳಿನಲ್ಲಿ ಕುವೈತ್ಗೆ ತೆರಳಿದ್ದು, ಐದು ತಿಂಗಳಿನಿಂದ ಸಂಬಳ ನೀಡಿಲ್ಲ. ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ ಎಂದು ವಿಡಿಯೊದಲ್ಲಿ ಯುವಕರು ಅಳಲು ತೋಡಿಕೊಂಡಿದ್ದಾರೆ. ತಮ್ಮಂತೆಯೇ ವಿವಿಧ ರಾಜ್ಯಗಳಿಂದ ಬಂದಿರುವ 200 ಕಾರ್ಮಿಕರು ಸಂಕಷ್ಟದಲ್ಲಿರುವುದಾಗಿ ತಿಳಿಸಿದ್ದಾರೆ.
‘ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಮಾಲೀಕ ಪ್ರಸಾದ್ ಶೆಟ್ಟಿ ಎಂಬವರಿಗೆ 65,000 ನೀಡಿ ಜನವರಿ 7ರಂದು ಕುವೈತ್ಗೆ ಬಂದಿದ್ದೇವೆ. ಇಲ್ಲಿ ಬಂದ ಬಳಿಕ ಅತಂತ್ರರಾಗಿದ್ದೇವೆ. ಐದು ತಿಂಗಳಿನಿಂದ ಸಂಬಳ ನೀಡಿಲ್ಲ. ಕೆಲಸದ ಸ್ಥಳದಲ್ಲಿ ಊಟದ ವ್ಯವಸ್ಥೆಯನ್ನೂ ರದ್ದುಗೊಳಿಸಿದ್ದಾರೆ. ಊಟಕ್ಕಾಗಿ ನಾವು ಬೇಡುವ ಪರಿಸ್ಥಿತಿ ಬಂದಿದೆ’ ಎಂದು ಗಣೇಶ್ ಎಂಬುವವರು ಹೇಳಿರುವುದು ವಿಡಿಯೊದಲ್ಲಿದೆ.
‘ಕುವೈತ್ನ ಕೇಂಬ್ರಿಡ್ಜ್ ಎಂಬ ಕಂಪೆನಿಯಲ್ಲಿ ಉದ್ಯೋಗ ನೀಡುವುದಾಗಿ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆದರೆ, ಬೇರೆ ಕಂಪೆನಿಯಲ್ಲಿ ಕೆಲಸ ನೀಡಿದರು. ಊರಿಗೆ ಮರಳಿದರೆ ಸಾಕು ಎಂಬ ಸ್ಥಿತಿಯಲ್ಲಿದ್ದೇವೆ’ ಎಂದು ಇನ್ನೊಬ್ಬ ಯುವಕ ಹೇಳಿದ್ದಾರೆ.
‘ಸಹಾಯ ಕೇಳಿ ಕುವೈತ್ನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಸಂಪರ್ಕ ಮಾಡಿದೆವು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಈ ವಿಡಿಯೊವನ್ನು ಶಾಸಕ ವೇದವ್ಯಾಸ ಕಾಮತ್ ಅವರಿಗೆ ತಲುಪಿಸಿ. ನಮ್ಮ ನೆರವಿಗೆ ಬನ್ನಿ ಎಂದು ಅವರಲ್ಲಿ ಮನವಿ ಮಾಡುತ್ತೇವೆ. ಮಾಧ್ಯಮದವರು, ರಾಜಕಾರಣಿಗಳು ಮತ್ತು ಶಾಸಕರು ನಮ್ಮ ನೆರವಿಗೆ ಬನ್ನಿ. ದಯವಿಟ್ಟು ನಾವು ವಾಪಸು ಊರಿಗೆ ಬರಲು ನೆರವು ನೀಡಿ’ ಎಂದು ಇವರೆಲ್ಲರೂ ಬೇಡಿಕೊಂಡಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ 200ಕ್ಕೂ ಹೆಚ್ಚು ಮಂದಿ ಕೆಲಸಕ್ಕಾಗಿ ಬಂದು ಅಲ್ಲಿ ಸಂಕಷ್ಟದಲ್ಲಿದ್ದಾರೆ ಎಂದು ಈ ಯುವಕರು ವಿಡಿಯೊದಲ್ಲಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ