janadhvani

Kannada Online News Paper

ಕೆಸಿಎಫ್ ಹಜ್ಜ್ ಸ್ವಯಂ ಸೇವಕರಿಗೆ ಅಭಿನಂದನಾ ಸಮಾರಂಭ

ರಿಯಾದ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ವತಿಯಿಂದ 2018 ರ ಸಾಲಿನಲ್ಲಿ ಹಜ್ಜ್ ಸ್ವಯಂ ಸೇವಕರಾಗಿ ತೆರಳಿದ ಝೋನಲ್ ಗೊಳಪಟ್ಟ ಸುಮಾರು ಹತ್ತು ಸೆಕ್ಟರ್ ಗಳ ಐವತ್ತು ಮಂದಿ ಕಾರ್ಯಕರ್ತರಿಗೆ ಏರ್ಪಡಿಸಲಾದ ಅಭಿನಂದನಾ ಸಮಾರಂಭವು ಇಲ್ಲಿನ ಬತ್ತಾದ ಕ್ಲಾಸಿಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಸಮಾರಂಭವನ್ನು ಉದ್ಘಾಟಿಸಿದರು.

ವಿವಿಧ ಸೆಕ್ಟರ್ ಗಳಿಂದ ಸ್ವಯಂ ಸೇವಕರಾಗಿ ತೆರಳಿದ ಕಾರ್ಯಕರ್ತರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ನೆನಪಿನ ಫಲಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಮುಖಂಡರು ಹಾಗು ಕೆಸಿಎಫ್ ನ ವಿವಿಧ ಸೆಕ್ಟರ್ ಗಳ ನಾಯಕರು ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ವಿತರಿಸಿದರು.

2018 ಸಾಲಿನ ಹಜ್ಜ್ ಸೇವೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಕೆಸಿಎಫ್ ರಿಯಾದ್ ಝೋನ್ ನಾಯಕ, ಪ್ರಸಕ್ತ ಸಾಲಿನ ಹೆಚ್.ವಿ.ಸಿ ಸೌದಿ ರಾಷ್ಟ್ರೀಯ ಸಮಿತಿ ಸಂಚಾಲಕ, ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ, ಸಲೀಂ ಕನ್ಯಾಡಿ ಯವರನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಹಜ್ಜ್ ಸ್ವಯಂ ಸೇವಾ ಸಮಿತಿಯ ರಿಯಾದ್ ಪ್ರಾಂತ್ಯದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಹಣಕಾಸು ಉಸ್ತುವಾರಿಗಳಾಗಿ ಆಯ್ಕೆಗೊಂಡು ಶ್ಲಾಘನೀಯ ದುಡಿಮೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಜೀದ್ ವಿಟ್ಲ , ಹಸೈನಾರ್ ಕಾಟಿಪಳ್ಳ ಮತ್ತು ಅನ್ಸಾರ್ ಉಳ್ಳಾಲ್ ರನ್ನೂ ಸಭೆಯಲ್ಲಿ ಅಭಿನಂದಿಸಲಾಯಿತು.

ಕೇರಳ ಸರಕಾರದ ಸೌದಿ ನೋರ್ಕಾ ಸಲಹೆಗಾರ ಶಿಹಾಬ್ ಕೊಟ್ಟುಗಾಡ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸ್ವಯಂ ಸೇವಕರಾಗಿ ತೆರಳಿದ ಕಾರ್ಯಕರ್ತರ ಪೈಕಿ ನಮಾಝ್ ಚಿಕ್ಕಮಗಳೂರು, ಫಾರೂಕ್ ಸ’ಅದಿ ಹೆಚ್ ಕಲ್ಲು, ಗಫೂರ್ ರಾಯದುರ್ಗ ಹಾಗೂ ಹಬೀಬ್, ಟಿ.ಹೆಚ್ ತಮ್ಮ ಅಪೂರ್ವ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ಸಲೀಂ ಕನ್ಯಾಡಿ, ಕೆಸಿಎಫ್ ಮಲಾಝ್ ಸೆಕ್ಟರ್ ಶಿಕ್ಷಣ ವಿಭಾಗದ ಅಧ್ಯಕ್ಷ ಯಂಝ ಮುಸ್ಲಿಯಾರ್ ಕೊಡಗು, ಕೆಸಿಎಫ್ ಗೊರ್ನಾತ ಸೆಕ್ಟರ್ ಅಧ್ಯಕ್ಷ , ಹಿರಿಯ ಮುಂದಾಳು ಮುಹಮ್ಮದ್ ಹಾಜಿ ಸಿತಾರ್, ರೌದ ಸೆಕ್ಟರ್ ಅಧ್ಯಕ್ಷ ನಝೀರ್ ಮುಸ್ಲಿಯಾರ್ ನಂದಾವರ ಮುಂತಾದ ಗಣ್ಯರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕೆಸಿಎಫ್ ರಿಯಾದ್ ಝೋನ್ ಕೋಶಾಧಿಕಾರಿ ಇಸ್ಮಾಯಿಲ್ ಕಣ್ಣಂಗಾರ್, ರಿಯಾದ್ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷ ಹಂಝ ಮೈಂದಾಳ, ಕಾರ್ಯದರ್ಶಿ ಇಸ್ಮಾಯಿಲ್ ಜೋಗಿಬೆಟ್ಟು , ಶಿಫಾ ಸೆಕ್ಟರ್ ಅಧ್ಯಕ್ಷ ಯೂಸುಫ್ ಕಳಂಜಿಬೈಲ್, ಬದೀಯ ಸೆಕ್ಟರ್ ಅಧ್ಯಕ್ಷ ಉಮರ್ ಅಳಕೆಮಜಲು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ಮಲಾಝ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಖಾದರ್ ಸಾದಾತ್ ಆರಂಭದಲ್ಲಿ ಖಿರಾಅತ್ ಪಠಿಸಿದರು. ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಹಬೀಬ್, ಟಿ.ಹೆಚ್ ಕೊನೆಯಲ್ಲಿ ವಂದಿಸಿದರು. ಹಜ್ಜ್ ಸೇವಾ ಸಮಿತಿ ಸಂಚಾಲಕ ಹಸೈನಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com