janadhvani

Kannada Online News Paper

ಅನ್ಯ ಧರ್ಮೀಯರ ಗೀತೆ ಹಾಡದಂತೆ ಹಿಂದೂ ಗಾಯಕರಿಗೆ ಬೆದರಿಕೆ

ಬೆಂಗಳೂರು: ಕಳೆದ ವಾರದಿಂದ ತಮಿಳುನಾಡಿನಲ್ಲಿರುವ ಕರ್ನಾಟಕ ಸಂಗೀತಗಾರರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಬೆದರಿಕೆಗಳು ಬರಲು ಶುರುವಾಗಿದೆ. ಖ್ಯಾತ ಗಾಯಕರ ಫೇಸ್‍ಬುಕ್ ಪುಟ, ಟ್ವಿಟರ್ ಖಾತೆಗಳಿಗೆ ಬೆದರಿಕೆಯೊಡ್ಡುವ ಕಾರ್ಯಗಳ ಜತೆಗೆ ಯೂಟ್ಯೂಬ್ ಕಾಮೆಂಟ್ ಬಾಕ್ಸ್ ನಲ್ಲಿ ಬೆದರಿಕೆಯ ಕಾಮೆಂಟ್‍ಗಳು ಬರುತ್ತಿವೆ. ಟ್ವಿಟರ್‌ನಲ್ಲಿ  ‘traitors of Hinduism’, ‘shamers of Carnatic music’ ಮತ್ತು ‘disgusting cretins’ ಎಂಬ ಪದ ಬಳಸಿ ಸಂಗೀತಕಾರರನ್ನು ಅವಮಾನಿಸಲಾಗಿದೆ.

ಏನಿದು ಪ್ರಕರಣ?
ರಾಷ್ಟ್ರೀಯ ಸನಾತನ ಸೇವಾ ಸಂಘಂ ಎಂಬ ಸಂಘಟನೆ ಏಸು ಕ್ರಿಸ್ತ ಮತ್ತು ಅಲ್ಲಾಹುವಿನ ಭಾವಗೀತೆಗಳನ್ನು ಹಾಡದಂತೆ ಖ್ಯಾತ ಸಂಗೀತಕಾರ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಟಿ.ಎಂ ಕೃಷ್ಣ ಮತ್ತು ಒ.ಎಸ್ ಅರುಣ್ ಸೇರಿದಂತೆ ಕೆಲವು ಸಂಗೀತಕಾರರಿಗೆ ಬೆದರಿಕೆಯೊಡ್ಡಿದೆ.

ದಿ ಹಿಂದೂ ಪತ್ರಿಕೆಯ ವರದಿ ಪ್ರಕಾರ  ಒ.ಎಸ್ ಅರುಣ್ ಅವರು ಕ್ರಿಶ್ಚಿಯನ್ ಸಂಗೀತ ಕಾರ್ಯಕ್ರಮವಾದ ಏಸುವಿನ್ ಸಂಗಮ ಸಂಗೀತಮ್ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಕಿಡಿ ಹತ್ತಿತ್ತು. ಹಿಂದೂ ಗಾಯಕರು ಇತರ ಧರ್ಮದ ಭಕ್ತಿಗೀತೆಗಳನ್ನು ಹಾಡುವುದಕ್ಕೆ ತಕರಾರು ಕೇಳಿ ಬಂದಿದ್ದರಿಂದ ಒ.ಎಸ್ ಅರುಣ್ ಆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದಾರೆ.

ರಾಷ್ಟ್ರೀಯ ಸನಾತನ ಸೇವಾ ಸಂಘಂ (ಆರ್‌ಎಸ್‌ಎಸ್ಎಸ್) ಸಂಸ್ಥಾಪಕ ಎಸ್ ರಮಾನಾಥನ್ ಅವರು ಅರುಣ್ ಅವರಿಗೆ ಬೆದರಿಕೆಯೊಡ್ಡಿದ್ದರಿಂದ ಅರುಣ್ ಆ ಸಂಗೀತ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ರಮಾನಾಥನ್ ಅವರ ಜತೆಗಿನ ಸಂಭಾಷಣೆ ವೇಳೆ ಅರುಣ್ ಅವರು ನನ್ನನ್ನೊಬ್ಬನನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ? ಇನ್ನಿತರ ಗಾಯಕರು ಕೂಡಾ ಇತರ ಧರ್ಮದ ಭಕ್ತಿಗೀತೆಗಳನ್ನು ಹಾಡುತ್ತಿದ್ದಾರಲ್ಲವೇ? ಟಿ.ಎಂ ಕೃಷ್ಣ ಅವರು ಕೂಡಾ ಚರ್ಚ್ ನಲ್ಲಿ ಹಾಡು ಹಾಡಿದ್ದರು ಎಂದಿದ್ದರು.ಆನಂತರ ಆರ್‌ಎಸ್ಎಸ್ಎಸ್ ಇತರ ಗಾಯಕರ ಮೇಲೆಯೂ ಬೆದರಿಕೆಯೊಡ್ಡಲು ಶುರು ಮಾಡಿತ್ತು.

ಆಗಸ್ಟ್ 26ರಂದು ನಡೆಯಲಿರುವ ಏಸುವಿನ್ ಸಂಗಮ ಸಂಗೀತಮ್ –ಈ ಸಂಗೀತ ಕಾರ್ಯಕ್ರಮದ ಪರಿಕಲ್ಪನೆ ಟಿ.ಸಾಮ್ಯುಲ್ ಜೋಸೆಫ್  (ಶ್ಯಾಮ್) ಅವರದ್ದಾಗಿದೆ. ಶ್ಯಾಮ್ ಮತ್ತು ನಾನು ಜತೆಯಾಗಿ ಕಾರ್ಯಕ್ರಮ ನಡೆಸುತ್ತಿರುವುದು ಇದೇ ಮೊದಲೇನೂ ಅಲ್ಲ. ದಶಕಗಳಿಂದ ಶ್ಯಾಮ್ ಅವರು ಹಲವಾರು ಸಂಗೀತಕಾರರೊಂದಿಗೆ  ಕೆಲಸಮಾಡಿದ್ದಾರೆ.  ಕಳೆದ ಮೂರು ದಶಕಗಳಲ್ಲಿ ನಾನು ಏಸುವಿಗೆ ಸಂಬಂಧಿಸಿದ ಹಲವಾರು ಆಲ್ಬಂಗಳಲ್ಲಿ ಹಾಡಿದ್ದೇನೆ ಎಂದು ಅರುಣ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಹಿಂದೂ ಗಾಯಕರು ಬೇರೆ ಧರ್ಮದ ದೇವರುಗಳನ್ನು ಸ್ತುತಿಸಿ ಹಾಡುವುದು ಮತ್ತು ಇತರ ಸಮುದಾಯದವರು ಕರ್ನಾಟಕ ಸಂಗೀತವನ್ನು ಮೆಚ್ಚಿಕೊಂಡಿರುವ ಬಗ್ಗೆ ಆರ್‌ಎಸ್‌ಎಸ್ಎಸ್ ಸಂಘಟನೆ ತಕರಾರು ವ್ಯಕ್ತ ಪಡಿಸಿದೆ.

ಇತರ ಗಾಯಕರಿಗೂ ಬೆದರಿಕೆ ಕಾಮೆಂಟ್

ಹಿಂದೂ ಧರ್ಮದ ಹೊರತಾಗಿ ಬೇರೆ ಧರ್ಮಗಳ ಗೀತೆ ಹಾಡಬಾರದೆಂಬ ಆರ್‌ಎಸ್‌ಎಸ್ಎಸ್ ಸಂಘಟನೆಯ ಬೆದರಿಕೆ ಕಾಮೆಂಟ್‍ಗಳು ಟಿ.ಎಂ. ಕೃಷ್ಣ  ಅವರಿಗೂ ತಲುಪಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಅವರು, ಗಾಯಕರಿಗೆ ಎರಡು ಆಯ್ಕೆಗಳಿವೆ.  ನಾವು ಎಲ್ಲ ಧರ್ಮದ ಹಾಡುಗಳನ್ನು ಹಾಡುತ್ತೇವೆ ಎಂಬ ತತ್ವಜ್ಞಾನದ ನಿಲುವು ಇಲ್ಲವೇ, ವೃತ್ತಿಪರರಾಗಿರುವುದರಿಂದ ಎಲ್ಲ ರೀತಿಯ ಹಾಡುಗಳನ್ನು ಹಾಡುತ್ತೇವೆ ಎಂಬ ನಿಲುವನ್ನು ಸ್ವೀಕರಿಸಬೇಕೆಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಕೃಷ್ಣ, ಏಸು ಬಗ್ಗೆ ಸ್ತುತಿಸಿರುವ ಕರ್ನಾಟಕ ಸಂಗೀತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಮತ್ತು ದ್ವೇಷದ ಕಾಮೆಂಟ್‍ಗಳನ್ನು ನೋಡುತ್ತಿದ್ದೇನೆ. ಇನ್ನು ಮುಂದೆ ನಾನು ಪ್ರತಿ ತಿಂಗಳು ಅಲ್ಲಾ ಅಥವಾ ಏಸು ಬಗ್ಗೆ ಒಂದು ಹಾಡನ್ನು ಬಿಡುಗಡೆ ಮಾಡಲಿದ್ದೇನೆ ಎಂದು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

ಖ್ಯಾತ ಗಾಯಕಿ ನಿತ್ಯಾಶ್ರೀ ಮಹಾದೇವನ್ ಅವರಿಗೂ ಇದೇ ರೀತಿಯ ಬೆದರಿಕೆಗಳು ಬಂದಿವೆ.  ನಿತ್ಯಾ ಶ್ರೀ ಹಾಡಿದ ಕ್ರಿಶ್ಚಿಯನ್ ಭಕ್ತಿಗೀತೆ ಸಮಾನುಲೇವರು ಪ್ರಭೂ ಎಂಬ ಹಾಡಿಗೆ ದ್ವೇಷದ ಕಾಮೆಂಟುಗಳು ಬಂದಿವೆ.

ಈ ಬಗ್ಗೆ  ಪ್ರತಿಕ್ರಿಯಿಸಿದ  ನಿತ್ಯಾಶ್ರೀ, ನನ್ನ ಬಗ್ಗೆ  ದೂಷಿಸಿರುವ ಕಾಮೆಂಟ್ ವೈರಲ್ ಆಗಿದ್ದನ್ನು ನೋಡಿ ನನಗೆ ತುಂಬಾ ದುಃಖವಾಗಿದೆ. ಧರ್ಮಗಳ ನಡುವೆ ಶಾಂತಿ, ಸಾಮರಸ್ಯ ಕಾಪಾಡುವ ಹಾಡು ಅದಾಗಿರುವುದರಿಂದ  ನಾನು ಖುಷಿಯಿಂದಲೇ ಏಸು ಕ್ರಿಸ್ತನನ್ನು ಸ್ತುತಿಸಿರುವ ಹಾಡು ಹಾಡಿದ್ದೆ . ನಿಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದರೆ ಕ್ಷಮಿಸಿ ಎಂದು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ಏತನ್ಮಧ್ಯೆ,  ಖ್ಯಾತ ಗಾಯಕರಾದ ಶ್ರೀನಿವಾಸ್ ಅವರು, ನಾನು ಹಾಡಿದ ಕ್ರಿಶ್ಚಿಯನ್ ಭಕ್ತಿಗೀತೆಗಳು ಈಗ ಖ್ಯಾತಿಗಳಿಸುತ್ತಿವೆ.  ಜನರು ಈಗ ಅದನ್ನೆಲ್ಲಾ ಕೇಳ ತೊಡಗಿದ್ದು, ನನಗೆ ಖುಷಿಕೊಟ್ಟಿದೆ ಎಂದಿದ್ದಾರೆ.

ಕೃಪೆ:ಪ್ರಜಾವಾಣಿ

error: Content is protected !! Not allowed copy content from janadhvani.com