janadhvani

Kannada Online News Paper

ಅನಿವಾಸಿ ಕನ್ನಡಿಗರ ಸಚಿವಾಲಯ ಘೋಷಣೆ: ಕರ್ನಾಟಕ ಮುಸ್ಲಿಂ ಜಮಾಅತ್ ಶ್ಲಾಘನೆ

ಕೇರಳದ 'ನೋರ್ಕಾ' (NORKA) ಇಲಾಖೆಯಂತಹ ಯಶಸ್ವಿ ಮಾದರಿಯಂತೆ ಇದು ಕೂಡ ಕಾರ್ಯನಿರ್ವಹಿಸಲಿ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಶಿಸುತ್ತದೆ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಪ್ರತ್ಯೇಕ ‘ಅನಿವಾಸಿ ಕನ್ನಡಿಗರ ಸಚಿವಾಲಯ’ವನ್ನು ಘೋಷಿಸಿರುವುದನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯು ಮುಕ್ತಕಂಠದಿಂದ ಶ್ಲಾಘಿಸಿದೆ. ಇದು ವಿದೇಶ ಹಾಗೂ ಹೊರರಾಜ್ಯಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರ ಹಿತರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಜಮಾಅತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭಿಕ ದಿನಗಳಲ್ಲೇ ಅನಿವಾಸಿ ಕನ್ನಡಿಗರ ಬಹುದಿನಗಳ ಈ ಪ್ರಮುಖ ಬೇಡಿಕೆಯನ್ನು ಈಡೇರಿಸಿದ ನೂತನ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು, ಈ ಜನಪರ ತೀರ್ಮಾನಕ್ಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.

ಕೇರಳದ ‘ನೋರ್ಕಾ’ (NORKA) ಇಲಾಖೆಯಂತಹ ಯಶಸ್ವಿ ಮಾದರಿಯಂತೆ ಇದು ಕೂಡ ಕಾರ್ಯನಿರ್ವಹಿಸಲಿ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಶಿಸುತ್ತದೆ. ಜಗತ್ತಿನಾದ್ಯಂತ ವಾಸಿಸುತ್ತಿರುವ ಅಂದಾಜು 18 ಲಕ್ಷ ಅನಿವಾಸಿ ಕನ್ನಡಿಗರ ಪಾಲಿಗೆ ಇದೊಂದು ಪ್ರಮುಖ ಮೈಲಿಗಲ್ಲಾಗಿದ್ದು, ಸರ್ಕಾರದ ಈ ತೀರ್ಮಾನದಿಂದ ತಮ್ಮ ತಾಯ್ನಾಡಿನಲ್ಲಿ ಹೂಡಿಕೆ ಮಾಡಲು, ಉದ್ಯಮದ ಬೆಳವಣಿಗೆಗೆ ಉತ್ತೇಜನ ನೀಡಲು ಸುಲಭ ಸೌಲಭ್ಯ ಒದಗಿಸಲಿದೆಯೆಂದು ಮುಸ್ಲಿಂ ಜಮಾಅತ್ ಅಭಿಪ್ರಾಯಪಟ್ಟಿದೆ.

ವಿದೇಶದಲ್ಲಿರುವ ವಲಸಿಗರು ಎದುರಿಸುವ ಆಡಳಿತಾತ್ಮಕ, ಕಾನೂನು ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ತ್ವರಿತ ಮತ್ತು ಅಧಿಕೃತ ವ್ಯವಸ್ಥೆಯನ್ನು ಕೂಡ ಇದು ಒದಗಿಸಲಿದೆಯೆಂದೂ ತುರ್ತು ನೆರವು ಮತ್ತು ಸ್ವದೇಶಕ್ಕೆ ವಾಪಸಾತಿ, ಬಿಕ್ಕಟ್ಟುಗಳು, ಉದ್ಯೋಗ ವಂಚನೆಗಳು ಅಥವಾ ವಿದೇಶದಲ್ಲಿ ಸಂಭವಿಸುವ ದುರದೃಷ್ಟಕರ ಸಾವುಗಳ ಸಂದರ್ಭದಲ್ಲಿ ಅಗತ್ಯವಿರುವ ನಿರ್ವಹಣಾ ಪ್ರಕ್ರಿಯೆಗಳನ್ನು ಸುಲಭವಾಗಿ ಮತ್ತು ವ್ಯವಸ್ಥಿತವಾಗಿ ನಿಭಾಯಿಸುವುದು ಈ ಸಚಿವಾಲಯದ ಮೂಲಕ ಸಾಧ್ಯ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಹೇಳಿದೆ.

ರಾಜ್ಯದೊಂದಿಗಿನ ಸಾಂಸ್ಕೃತಿಕ ಹಾಗೂ ವೃತ್ತಿಪರ ಬಾಂಧವ್ಯವನ್ನು ಬಲಪಡಿಸಲು ಈ ಸಚಿವಾಲಯದ ಮೂಲಕ ಸಾಧ್ಯವಿದೆಯೆಂದೂ ಇದು ಇಡೀ ಅನಿವಾಸಿ ಕನ್ನಡಿಗ ಸಮುದಾಯಕ್ಕೆ ಅಭಿನಂದನೀಯ ಕ್ಷಣವಾಗಿದೆಯೆಂದೂ ಮುಸ್ಲಿಂ ಜಮಾಅತ್ ಬಣ್ಣಿಸಿದೆ. ಇದು ಅವರು ತಮ್ಮ ತಾಯ್ನಾಡಿನೊಂದಿಗೆ ಸಂಪರ್ಕದಲ್ಲಿರಲು, ರಕ್ಷಣೆ ಪಡೆಯಲು ಮತ್ತು ಕರ್ನಾಟಕದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸುಗಮವಾದ ಮಾರ್ಗಗಳನ್ನು ಮುಕ್ತಗೊಳಿಸುತ್ತದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿರಿ...