ಕೋಝಿಕೋಡ್: ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಹಿಜಾಬ್ ನಿರ್ಬಂಧದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಹಿಂಪಡೆದಿದೆ. ಈ ಮಹತ್ವದ ನಿರ್ಧಾರದ ಹಿಂದೆ ಕೇರಳದ ಮರ್ಕಝ್ನಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ , ಕರ್ನಾಟಕ ಅಲ್ಪಸಂಖ್ಯಾತರ ಸಚಿವರಾದ ಬಿ ಝಡ್ ಜಮೀರ್ ಅಹಮದ್ ಖಾನ್ ಮತ್ತು ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು ನಡುವೆ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ನೀಡಿದ್ದ ಸಲಹೆ ಪ್ರಮುಖ ಪಾತ್ರ ವಹಿಸಿದೆ.

ಮರ್ಕಝ್ ಭೇಟಿ ಮತ್ತು ಐತಿಹಾಸಿಕ ಚರ್ಚೆ:
ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ವಖ್ಫ್ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇರಳ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಅವರು ಕೋಝಿಕೋಡ್ನಲ್ಲಿರುವ ಕಾಂತಪುರಂ ಎ.ಪಿ. ಉಸ್ತಾದ್ ಅವರ ಸುಪ್ರಸಿದ್ಧ ‘ಮರ್ಕಝ್’ ಸಂಸ್ಥೆಗೆ ಭೇಟಿ ನೀಡಿದ್ದರು. ವಖ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು ಅವರು ಈ ನಿಯೋಗದಲ್ಲಿದ್ದು, ಕರ್ನಾಟಕದ ಮುಸ್ಲಿಂ ಸಮುದಾಯದ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ವೇದಿಕೆ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ನಡೆದ ಸುದೀರ್ಘ ಮಾತುಕತೆಯಲ್ಲಿ ಕಾಂತಪುರಂ ಉಸ್ತಾದ್ ಅವರು ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಹಿಜಾಬ್ ನಿರ್ಬಂಧದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. “ಧಾರ್ಮಿಕ ಹಕ್ಕಿನ ಭಾಗವಾಗಿರುವ ಹಿಜಾಬ್ ಅನ್ನು ನಿರ್ಬಂಧಿಸಿರುವುದು ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಕಲಿಕೆಗೆ ದೊಡ್ಡ ಅಡ್ಡಿಯಾಗಿದೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಈ ಆದೇಶವನ್ನು ಹಿಂಪಡೆದು, ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಪೂರಕವಾದ ವಾತಾವರಣ ನಿರ್ಮಿಸಬೇಕು” ಎಂದು ಅವರು ನಾಯಕರಲ್ಲಿ ಮನವಿ ಮಾಡಿದ್ದರು.
ಸರ್ಕಾರದ ನಿರ್ಧಾರಕ್ಕೆ ಕಾಂತಪುರಂ ಅವರ ಪ್ರೇರಣೆ:
ಅಂದು ಮರ್ಕಝ್ನಲ್ಲಿ ನಡೆದ ಚರ್ಚೆಯ ಫಲವಾಗಿ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ ಝಡ್ ಜಮೀರ್ ಅಹ್ಮದ್ ಗೆ ಈ ಸಮಸ್ಯೆಗೆ ಅಂತಿಮ ಪರಿಹಾರ ಕೊಡಲು ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮಾರ್ಗದರ್ಶನ ನೀಡಿತ್ತು. ಇದೀಗ ಬಿಜೆಪಿ ಅವಧಿಯ 2022ರ ವಿವಾದಾತ್ಮಕ ಆದೇಶವನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ತನ್ನ ಭರವಸೆಯನ್ನು ಈಡೇರಿಸಿದೆ. ಈ ಮೂಲಕ ವೈಯಕ್ತಿಕ ಆಯ್ಕೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಾಗಿದೆ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೊಸ ಹಾದಿ:
ಹಿಜಾಬ್ ನಿರ್ಬಂಧದ ತೆರವಿನಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದ ವಿದ್ಯಾರ್ಥಿನಿಯರಲ್ಲಿ ಸಂತಸ ಮೂಡಿದೆ. ಈ ಯಶಸ್ಸಿನ ಹಿಂದೆ ಕಾಂತಪುರಂ ಉಸ್ತಾದರ ದೂರದೃಷ್ಟಿ, ಮೌಲಾನಾ ಶಾಫಿ ಸಅದಿ ಅವರ ಸಂಘಟನಾ ಚಾತುರ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಮತ್ತು ಕೆ.ಸಿ. ವೇಣುಗೋಪಾಲ್ ಅವರ ರಾಜಕೀಯ ಇಚ್ಛಾಶಕ್ತಿ ಪ್ರಮುಖವಾಗಿ ಕೆಲಸ ಮಾಡಿದೆ. ಈ ಸಂಘಟಿತ ಪ್ರಯತ್ನವು ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕಿನಲ್ಲಿ ಹೊಸ ಭರವಸೆಯ ಕಿರಣವನ್ನು ಮೂಡಿಸಿದೆ.
___________________________________
ಕಾಂತಪುರಂ ಉಸ್ತಾದರ ಫೇಸ್ಬುಕ್ ಪುಟದಿಂದ
ಶಾಲೆಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳನ್ನು ಧರಿಸುವುದಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದ ಕರ್ನಾಟಕ ಸರ್ಕಾರದ ಕ್ರಮವು ದೇಶದ ಜಾತ್ಯತೀತ ಮೌಲ್ಯಗಳನ್ನು ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯುವಂತಿದೆ.
ಹಿಜಾಬ್ ನಿಷೇಧ ಜಾರಿಗೆ ಬಂದ ಸಂದರ್ಭದಲ್ಲೇ ಸಂಬಂಧಪಟ್ಟವರಿಗೆ ಈ ಕುರಿತು ಮಾಹಿತಿ ನೀಡಲಾಗಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳು, ಅಲ್ಪಸಂಖ್ಯಾತ ಕಲ್ಯಾಣ ಸಚಿವರು ಮತ್ತು ಸ್ಪೀಕರ್ ಅವರೊಂದಿಗೆ ಈ ವಿಷಯವಾಗಿ ನೇರವಾಗಿಯೂ ಹಾಗೂ ಪರೋಕ್ಷವಾಗಿಯೂ ಹಲವು ಬಾರಿ ಸಂವಹನ ನಡೆಸಲಾಗಿತ್ತು. ತೀರಾ ಇತ್ತೀಚೆಗೆ ಕಳೆದ ತಿಂಗಳು ನನ್ನನ್ನು ಭೇಟಿ ಮಾಡಿದ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮತ್ತು ಕರ್ನಾಟಕದ ಅಲ್ಪಸಂಖ್ಯಾತ ಕಲ್ಯಾಣ ಸಚಿವರೊಂದಿಗೆ ಈ ವಿಷಯವನ್ನು ಒತ್ತಿ ಹೇಳಿದ್ದೆ, ಹಾಗೂ ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರೊಂದಿಗೆ ಫೋನ್ ಮೂಲಕವೂ ಮಾತನಾಡಲಾಗಿತ್ತು.
ಸಮಾನತೆ, ಘನತೆ, ಭ್ರಾತೃತ್ವ, ಶಿಕ್ಷಣದ ಹಕ್ಕು, ಜಾತ್ಯತೀತತೆ ಮತ್ತು ತರ್ಕಬದ್ಧತೆಯಂತಹ ಸಾಂವಿಧಾನಿಕ ಮೌಲ್ಯಗಳನ್ನು ಹಾಗೂ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ನಮ್ಮ ದೇಶದ ಪರಂಪರೆಯನ್ನು ಈ ಆದೇಶವು ಒಳಗೊಂಡಿದೆ. ಸಂವಿಧಾನ ವಿರೋಧಿಯಾದ ಮತ್ತು ಶಿಕ್ಷಣದ ಹಕ್ಕನ್ನು ನಿರಾಕರಿಸುವಂತಿದ್ದ ಹಿಂದಿನ ಸರ್ಕಾರದ ನಿಲುವನ್ನು ತಿದ್ದಿಕೊಳ್ಳಲು ಮುಂದಾದ ಸರ್ಕಾರಕ್ಕೆ ನನ್ನ ಅಭಿನಂದನೆಗಳು.
ಧಾರ್ಮಿಕ ಮತ್ತು ಸಾಂಪ್ರದಾಯಿಕ ಉಡುಪುಗಳ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳಿಂದ ಹೊರಹಾಕಬಾರದು ಎಂಬ ಈ ಆದೇಶವನ್ನು ತಾರತಮ್ಯವಿಲ್ಲದೆ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಜಾಗ್ರತೆ ವಹಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ.
https://www.facebook.com/share/1DK7x8vuuc/















ಇನ್ನಷ್ಟು ಸುದ್ದಿಗಳು
ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಪಿನ ಮೇಲಿದ್ದ ನಿರ್ಬಂಧ ತೆರವು: ಸರ್ಕಾರದ ನಿರ್ಧಾರ ಸ್ವಾಗತಾರ್ಹ – ಎಸ್ಸೆಸ್ಸೆಫ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ನ್ಯಾಯಕ್ಕಾಗಿ ಬೀದಿಗಿಳಿಯಲು ಎಸ್ಸೆಸ್ಸೆಫ್ ದ.ಕ ಈಸ್ಟ್ ಕ್ಯಾಂಪಸ್ ಚೇಂಬರ್ ಕರೆ
ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್- ಸೋಮವಾರ ಪ್ರಮಾಣವಚನ
ರಾಜ್ಯದಲ್ಲಿ ಹಿಜಾಬ್ ನಿರ್ಬಂಧದ ಆದೇಶ ರದ್ದು: ಸಿದ್ದರಾಮಯ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ಶರಫುಲ್ ಉಲಮಾ ಉಸ್ತಾದ್ 7ನೇ ವಾರ್ಷಿಕ ಅನುಸ್ಮರಣೆ – ಮೇ 13, 14 ರಂದು ಪ್ರಾರ್ಥನಾ ಸಂಗಮ
“ನಿಮ್ಮವರೇ ಹೀಗೆ” – ಕೆಎಸ್ಆರ್ಟಿಸಿ ನಿರ್ವಾಹಕನ ನಡತೆಗೆ ಶಿಕ್ಷಕಿಯ ಮನದ ಅಳಲು
ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ