janadhvani

Kannada Online News Paper

ಸೌದಿ ನೇತೃತ್ವದ ವಿಶೇಷ ತಂಡ ಚೀನಾಕ್ಕೆ- ಗಾಝಾದಲ್ಲಿ ಕದನ ವಿರಾಮಕ್ಕಾಗಿ ಒತ್ತಡ

ಪ್ಯಾಲೆಸ್ಟೈನ್, ಜೋರ್ಡಾನ್, ಈಜಿಪ್ಟ್, ಕತಾರ್, ಟರ್ಕಿ, ಇಂಡೋನೇಷ್ಯಾ ಮತ್ತು ನೈಜೀರಿಯಾದ ವಿದೇಶಾಂಗ ಮಂತ್ರಿಗಳು ತಂಡದಲ್ಲಿದ್ದಾರೆ.

ರಿಯಾದ್: ಸೌದಿ ನೇತೃತ್ವದ ದೇಶಗಳ ವಿಶೇಷ ತಂಡ ಸೋಮವಾರ ಚೀನಾಕ್ಕೆ ಆಗಮಿಸಲಿದೆ. ಗಾಝಾದಲ್ಲಿ ಕದನ ವಿರಾಮಕ್ಕಾಗಿ ಒತ್ತಡವನ್ನು ಹೆಚ್ಚಿಸುವುದು ಗುರಿಯಾಗಿದೆ ಎಂದು ಸೌದಿ ವಿದೇಶಾಂಗ ಸಚಿವರು ಹೇಳಿದರು.

ಕಳೆದ ವಾರ ನಡೆದ ಅರಬ್ ಇಸ್ಲಾಮಿಕ್ ರಾಷ್ಟ್ರಗಳ ತುರ್ತು ಸಭೆಯ ನಿರ್ಧಾರವನ್ನು ಜಾರಿಗೆ ತರಲಾಗುತ್ತಿದೆ. ಈ ತಂಡವು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಸದಸ್ಯ ರಾಷ್ಟ್ರಗಳು ಮತ್ತು ಪ್ರಭಾವಿ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದೆ. ಪ್ಯಾಲೆಸ್ಟೈನ್, ಜೋರ್ಡಾನ್, ಈಜಿಪ್ಟ್, ಕತಾರ್, ಟರ್ಕಿ, ಇಂಡೋನೇಷ್ಯಾ ಮತ್ತು ನೈಜೀರಿಯಾದ ವಿದೇಶಾಂಗ ಮಂತ್ರಿಗಳು ತಂಡದಲ್ಲಿದ್ದಾರೆ.

ಪ್ಯಾಲೆಸ್ತೀನ್ ಹತ್ಯಾಕಾಂಡಕ್ಕೆ ಅಮೆರಿಕವೇ ಸಂಪೂರ್ಣ ಹೊಣೆ ಎಂದು ಹಮಾಸ್ ನಾಯಕ ಒಸಾಮಾ ಹಮ್ದಾನ್ ಹೇಳಿದ್ದಾರೆ. ಮಕ್ಕಳು ಮತ್ತು ಮಹಿಳೆಯರನ್ನು ಹಸಿವಿನಿಂದ ಸಾಯಿಸುವುದು ಇಸ್ರೇಲ್ ನೀತಿ. ಅಂತರಾಷ್ಟ್ರೀಯ ಸಮುದಾಯದ ಮುಂದುವರಿದ ಮೌನವು ಇಸ್ರೇಲಿನ ಅನಿಯಂತ್ರಿತ ಹಿಂಸಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಶತ್ರುಗಳ ವಿರುದ್ಧದ ಹೋರಾಟ ನಡೆಯಿಂದ ಹಿಂದೆ ಸರಿಯುವುದಿಲ್ಲ. ಪ್ಯಾಲೆಸ್ತೀನ್‌ನ ಸ್ವಾತಂತ್ರ್ಯ ಮತ್ತು ಭೂಮಿಯ ಮೇಲಿನ ಹಕ್ಕುಗಳನ್ನು ಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಹಮ್ದಾನ್ ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್ ದಾಳಿಯಲ್ಲಿ ಗಾಝಾದಲ್ಲಿ 12,000 ಜನರು ಮೃತಪಟ್ಟಿದ್ದಾರೆ.ಕೊಲ್ಲಲ್ಪಟ್ಟವರಲ್ಲಿ 5,000 ಕ್ಕೂ ಹೆಚ್ಚು ಮಕ್ಕಳು ಮತ್ತು 3,300 ಮಹಿಳೆಯರು. ವೈದ್ಯರು ಮತ್ತು ದಾದಿಯರು ಸೇರಿದಂತೆ 200 ಆರೋಗ್ಯ ಕಾರ್ಯಕರ್ತರು ಮತ್ತು 51 ಪತ್ರಕರ್ತರು ಕೊಲ್ಲಲ್ಪಟ್ಟರು. ಶುದ್ಧ ನೀರಿನ ಕೊರತೆಯಿಂದ 30,000 ಜನರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. 1800 ಮಕ್ಕಳು ಸೇರಿದಂತೆ 3750 ಮಂದಿ ನಾಪತ್ತೆಯಾಗಿದ್ದಾರೆ.

error: Content is protected !! Not allowed copy content from janadhvani.com