janadhvani

Kannada Online News Paper

ಅನ್ನಭಾಗ್ಯ: ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಅಕ್ಕಿ ದಾಸ್ತಾನು ಆಗುವವರೆಗೂ ಕೆಜಿ ಅಕ್ಕಿಗೆ 34 ರೂಪಾಯಿ, ಒಟ್ಟು ಐದು ಕೆಜಿಗೆ 170 ರೂ. ಅನ್ನು ಪ್ರತಿಯೊಬ್ಬರಿಗೂ ನೀಡಲು ತೀರ್ಮಾನ ಮಾಡಲಾಗಿದೆ

ಬೆಂಗಳೂರು,ಜೂನ್.28: ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಕಾರಣ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ಹಾಗೂ ಹೆಚ್ಚುವರಿ ಐದು ಕೆಜಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಜುಲೈ ತಿಂಗಳಿನಿಂದಲೇ 5 ಕೆಜಿ ಅಕ್ಕಿ ಬದಲು ಹಣ ಹಾಕಲು ಸರ್ಕಾರ ತೀರ್ಮಾನಿಸಿದ್ದು, ಅಕ್ಕಿ ದಾಸ್ತಾನು ಆಗುವವರೆಗೂ ಹಣ ವಿತರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸಚಿವ ಕೆಎಚ್‌ ಮುನಿಯಪ್ಪ, ಅಕ್ಕಿ ಸಿಗುವುದು ಕಷ್ಟವಾಗಿದೆ. ಅಕ್ಕಿ ಕೊಡಲು ಕೆಲವರು ಒಪ್ಪಿದ್ದಾರೆ, ಕೆಲವರು ಒಪ್ಪಿಲ್ಲ. ಆದ್ದರಿಂದ ಐದು ಕೆಜಿ ಅಕ್ಕಿ – ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ನಾನು ಕೇಂದ್ರ ಸರ್ಕಾರಕ್ಕೆ ಹಣ ಕೊಡ್ತೀವಿ ಅಕ್ಕಿ ಕೊಡಿ ಎಂದು ಮನವಿ ಮಾಡಿದ್ದೆ. ಆದರೆ, ಹೆಚ್ಚುವರಿ ಅಕ್ಕಿ ಕೊಡಲು ಆಗಲ್ಲ ಎಂದು ಅವರು ಹೇಳಿದರು. ಒಪನ್ ಟೆಂಡರ್‌ನಲ್ಲಿ ಕೆಜಿಗೆ 31 ರೂಪಾಯಿಯಂತೆ ಬೇರೆಯವರಿಗೆ ಅಕ್ಕಿಯನ್ನು ನೀಡಿದ್ದಾರೆ. ಆದರೆ, ನಾವು ಕೆಜಿಗೆ 34 ರೂಪಾಯಿ ಕೊಡ್ತೀವಿ ಅಂದ್ರು ಕೊಡಲಿಲ್ಲ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದೆ ಎಂದು ಕಿಡಿಕಾರಿದರು.

ಅಕ್ಕಿ ದಾಸ್ತಾನು ಆಗುವವರೆಗೂ ಕೆಜಿ ಅಕ್ಕಿಗೆ 34 ರೂಪಾಯಿ, ಒಟ್ಟು ಐದು ಕೆಜಿಗೆ 170 ರೂ. ಅನ್ನು ಪ್ರತಿಯೊಬ್ಬರಿಗೂ ನೀಡಲು ತೀರ್ಮಾನ ಮಾಡಲಾಗಿದೆ. ಬಿಪಿಎಲ್‌ ಕಾರ್ಡ್‌ದಾರರ ಅಕೌಂಟ್‌ಗೆ ಹಣ ಹಾಕುತ್ತೇವೆ. ಜುಲೈ ಒಂದನೇ ತಾರೀಖು ಫಲಾನುಭವಿಗಳ ಅಕೌಂಟ್‌ಗೆ ಹಣ ಹಾಕುತ್ತೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡದ ಹಿನ್ನೆಲೆ ನಾವು ಮಾತು ಕೊಟ್ಟಂತೆ ಜುಲೈ ತಿಂಗಳಲ್ಲಿ ಹಣ ಕೊಡ್ತೀವಿ. ಒಂದು ತಿಂಗಳಿಗೆ ಸರ್ಕಾರಕ್ಕೆ 800 ಕೋಟಿ ರೂ. ಖರ್ಚು ಆಗುತ್ತೆ. ಆದಷ್ಟು ಬೇಗ ಅಕ್ಕಿ ಕೊಡ್ತೀವಿ. ಅಕ್ಕಿ ಸಿಗುವವರೆಗೂ ಹಣ ಕೊಡ್ತೀವಿ ಎಂದು ಹೇಳಿದರು.

ಕೊಡ್ತೀವಿ. ಅಕ್ಕಿ ಸಿಗುವವರೆಗೂ ಹಣ ಕೊಡ್ತೀವಿ ಎಂದು ಹೇಳಿದರು.

ಯಾರಿಗೆ? ಎಷ್ಟು ಹಣ ?
ಇನ್ನು, ಓರ್ವ ಸದಸ್ಯರಿರುವ ಕುಟುಂಬಕ್ಕೆ 5 ಕೆಜಿ, ಇಬ್ಬರು ಸದಸ್ಯರಿರುವ ಕುಟುಂಬಕ್ಕೆ 10 ಕೆಜಿ, ಐವರು ಇರುವ ಕುಟುಂಬಕ್ಕೆ 25 ಕೆಜಿ ಅಕ್ಕಿ ನಿಗದಿಪಡಿಸಲಾಗಿದೆ. ಅದರಂತೆ ಕೆಜಿಗೆ 34 ರೂ. ನಂತೆ ಒಬ್ಬರಿಗೆ 170 ರೂ. ನೀಡಲಾಗುತ್ತದೆ. ಕುಟುಂಬದಲ್ಲಿ ಓರ್ವ ಸದಸ್ಯ ಇದ್ದರೆ 170 ರೂ., ಇಬ್ಬರು ಇದ್ದರೆ 340 ರೂ. ಮೂವರು ಇದ್ದರೆ 510 ರೂ., ನಾಲ್ವರು ಇದ್ದರೆ 680 ರೂ., ಐವರು ಸದಸ್ಯರ ಕುಟುಂಬಕ್ಕೆ 850 ರೂ. ತಿಂಗಳಿಗೆ ಸಿಗಲಿದೆ. ಇದು ತಾತ್ಕಾಲಿಕ ಮಾತ್ರ, ಅಕ್ಕಿ ಸಿಕ್ಕ ಬಳಿಕ ಅಕ್ಕಿಯನ್ನೇ ನೀಡಲಾಗುತ್ತದೆ. ಪ್ರತಿ ಬಿಪಿಎಲ್ ಕಾರ್ಡ್‌ಗಳಲ್ಲಿ ಕುಟುಂಬದ ಯಜಮಾನ ಯಾರು ಎಂದು ನಮೂದಾಗಿರುತ್ತದೆ. ಅವರ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಮಾತು ಉಳಿಸಿಕೊಂಡಿದ್ದೇವೆ ಎಂದ ಎಚ್‌ಕೆ ಪಾಟೀಲ್‌
ಇನ್ನು, ಈ ಬಗ್ಗೆ ಮಾತನಾಡಿರುವ ಕಾನೂನು ಸಚಿವ ಎಚ್‌ಕೆ ಪಾಟೀಲ್‌, ಹಣ ನೀಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಈ ಮೂಲಕ ನಾವು ಕೊಟ್ಟ ಮಾತನ್ನು ಉಳಿಸಿಕೊಡಂಡಿದ್ದೇವೆ. ಜನರಿಗೆ ಭರವಸೆ ಕೊಟ್ಟಿದ್ದೇವು, ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಒಬ್ಬರಿಗೆ ಪ್ರತಿ ತಿಂಗಳು 170 ರೂ. ಖರ್ಚು ಆಗುತ್ತದೆ. ಅದನ್ನು ಅಕೌಂಟ್ ಮೂಲಕ ಹಾಕುತ್ತೇವೆ. ಅನ್ನ ಭಾಗ್ಯ ಯೋಜನೆ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಕಿಡಿಕಾರಿದರು.