ನವದೆಹಲಿ: ಹಲವು ರಾಜಕೀಯ ಆಯಾಮಗಳ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ತೀವ್ರ ವಿಷಾದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಕ್ಷದ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ಸಮಿತಿಯಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಅವರನ್ನು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಇತ್ತೀಚೆಗೆ ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದರು. ಈಗ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ಹಂಗಾಮಿ ಅಧ್ಯಕ್ಷರಿಗೆ ಸಲ್ಲಿಕೆ ಮಾಡಿರುವ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್, ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ತಮ್ಮ ಜೀವಿತದ ಅರ್ಧ ಅವಧಿಯನ್ನು ಪಕ್ಷದಲ್ಲಿಯೇ ಕಳೆದಿದ್ದೇನೆ ಎಂದಿರುವ ಗುಲಾಂ ನಬಿ ಆಜಾದ್, ಪಕ್ಷ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಇದ್ದ ಆಪ್ತ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಇಂದು ಕಾಂಗ್ರೆಸ್ ಪಕ್ಷದ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂದರೆ, ಅಲ್ಲಿಂದ ಪಕ್ಷ ವಾಪಾಸ್ ಗೆಲುವಿನ ಹಾದಿಗೆ ಬರುವುದು ಸುಲಭವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ. ಅಲ್ಲದೇ ರಾಹುಲ್ ಗಾಂಧಿಯವರ ವರ್ತನೆ ಚಿಕ್ಕ ಮಕ್ಕಳಂತೆ ಇದೆ. ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗಿದೆ ಎಂದು ಸೋನಿಯಾ ಗಾಂಧಿಗೆ ಸಲ್ಲಿಸಿರುವ ಸುಮಾರು ನಾಲ್ಕು ಪುಟಗಳುಳ್ಳ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ಉಲ್ಲೇಖಿಸಿದ್ದಾರೆ.
ಜಮ್ಮು ಕಾಶ್ಮೀರ ರಾಜಕೀಯದ ಹಿರಿಯ ರಾಜಕಾರಣಿಯಾಗಿರುವ ಗುಲಾಂ ನಬಿ ಆಜಾದ್, ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದ ವ್ಯಕ್ತಿಯಾಗಿದ್ದಾರೆ. ಬಿಹಾರದ ಪ್ರಾದೇಶಿಕ ಪಕ್ಷವೊಂದು ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಆಫರ್ ಅನ್ನೂ ಇತ್ತೀಚೆಗೆ ನೀಡಿತ್ತು.ಆದರೆ, ಈ ಆಫರ್ ಅನ್ನು ಅವರು ತಿರಸ್ಕರಿಸಿದ್ದರು. ಕಾಂಗ್ರೆಸ್ ಪಕ್ಷದೊಂದಿಗೆ ನಾನು ರಾಜಕೀಯದಲ್ಲಿ ಇದ್ದಿದ್ದು ಇದು ಕೊನೆಯ ಬಾರಿ ಎಂದು ಈ ವೇಳೆ ಅವರು ಹೇಳಿದ್ದರು.
ಕಾಂಗ್ರೆಸ್ನ ಇನ್ನೊಬ್ಬ ಪ್ರಭಾವಿ ನಾಯಕ ಆನಂದ್ ಶರ್ಮ ಅವರು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಗುಲಾಂ ನಬಿ ಆಜಾದ್ ಪಕ್ಷವನ್ನೇ ತೊರೆದಿದ್ದಾರೆ. ಪಕ್ಷದಲ್ಲಿ ತಮಗೆ ದೊಡ್ಡ ಮಟ್ಟದಲ್ಲಿ ಅವಮಾನವಾಗಿದೆ ಎಂದು ಆನಂದ್ ಶರ್ಮ ಹೇಳಿದ್ದರು. ಅವರೂ ಕೂಡ ಪಕ್ಷವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ಅತಿದೊಡ್ಡ ಆಘಾತವಾಗಿದೆ.
ರಾಹುಲ್ ಗಾಂಧಿಯಿಂದ ಈ ಸ್ಥಿತಿ:
ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಗುಲಾಂ ನಬಿ ಆಜಾದ್ ಸೇವೆ ಸಲ್ಲಿಸಿದ್ದರು. ರಾಹುಲ್ ಗಾಂಧಿಯವರ ನಿರ್ಧಾರದಿಂದ ಪಕ್ಷದಿಂದ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗಿದೆ. ನೀವು ಕೇವಲ ಪಕ್ಷದಲ್ಲಿ ಸಾಂಕೇಂತಿಕ ಅಧ್ಯಕ್ಷರು. ಆದರೆ, ಕಾಂಗ್ರೆಸ್ ಪಕ್ಷದ ಪ್ರಮುಖ ನಿರ್ಧಾರಗಳನ್ನು ರಾಹುಲ್ ಗಾಂಧಿ, ಅವರ ಪಿಎ ಹಾಗೂ ಭದ್ರತಾ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಗುಲಾಂ ನಬಿ ಆಜಾದ್ ಸೋನಿಯಾ ಗಾಂಧಿಯವರನ್ನು ಉಲ್ಲೇಖಿಸಿ ಪತ್ರದಲ್ಲಿ ಬರೆದಿದ್ದಾರೆ. ರಾಹುಲ್ ಗಾಂಧಿ ತೆಗೆದುಕೊಳ್ಳುವ ಬಾಲಿಶ ನಿರ್ಧಾರಗಳಿಂದಲೇ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಆರೋಪ ಮಾಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ