ಬೆಂಗಳೂರು: ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ. ಇಬ್ರಾಹಿಂ ಪರಿಷತ್ ವಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಆ ಸ್ಥಾನವನ್ನು ಬಿಕೆ ಹರಿಪ್ರಸಾದ್ ಅವರಿಗೆ ನೀಡಿದ ಹಿನ್ನೆಲೆ, ಸಿ.ಎಂ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆಯಲು ಸಿಎಂ ಇಬ್ರಾಹಿಂ ನಿರ್ಧರಿಸಿದ್ದಾರೆ. ಇಬ್ರಾಹಿಂ ಅವರು ಬೆಂಗಳೂರಿನಲ್ಲಿ ತಮ್ಮ ನಿಲುವು ಪ್ರಕಟಿಸಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲಿ ರಾಜೀನಾಮೆ ಕೊಡ್ತೇನೆ. ನಾನು ಜೆಡಿಎಸ್ ಸೇರುತ್ತೇನೊ? ಮಾಯಾವತಿ ಪಕ್ಷ ಸೇರುತ್ತೇನೊ ಗೊತ್ತಿಲ್ಲ. ದೇವೇಗೌಡರು ಪುಣ್ಯಾತ್ಮರು. ಡಿಕೆಶಿ ಜೊತೆಗೆ ಹೊಂದಾಣಿಕೆ ಆಗಲ್ಲ. ನಾನು ಕಾಂಗ್ರೆಸ್ ತೊರೆದರೆ ಅದರ ಪರಿಣಾಮವು ಯುಪಿ ಚುನಾವಣೆಯ ಮೇಲೆ ಬೀಳುತ್ತದೆ. ಯುಪಿ ಚುನಾವಣೆ ಫಲಿತಾಂಶದ ಪರಿಣಾಮವು ರಾಜ್ಯದ ಮೇಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಯುಪಿ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಚುನಾವಣೆ ಆಗಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆ ಬರಬಹುದು. ರಾಜಕೀಯದಲ್ಲಿ ಈವರೆಗೆ ನಾನು ಹೇಳಿದಂತೆಯೇ ಆಗಿದೆ. ಅಲ್ಪಸಂಖ್ಯಾತ ಸಮುದಾಯ ಜನಸಂಖ್ಯೆಯಲ್ಲಿ ನಂಬರ್ 1 ಇದೆ. ದೇಶದ ವಿವಿಧ ಭಾಗಗಳಿಂದ ನಂಗೆ ದೂರವಾಣಿ ಕರೆಗಳು ಬರುತ್ತಿವೆ.
ಇದೇ ವೇಳೆ, ಯಾರೂ ಕೈ ಬಿಟ್ಟರೂ ನೀವು (ಮಾಧ್ಯಮ) ನನ್ನ ಕೈ ಬಿಡಬೇಡಿ ಎಂದು ಮಾಧ್ಯಮದವರಿಗೆ ಇಬ್ರಾಹಿಂ ಮನವಿ ಮಾಡಿದರು. ಜನರಿಗೆ ಈಗ ವಿಶ್ವಾಸ ಉಳಿದಿರುವುದು ಮಾಧ್ಯಮ ಹಾಗೂ ನ್ಯಾಯಾಂಗದ ಮೇಲೆ. ನಂಗೆ ಸಾಲವಿದೆ, ನನ್ನ ಆಸ್ತಿ ಮಾರಿ ಸಾಲ ತೀರಿಸುತ್ತೇನೆ. ನಂಗೆ ಎಳೆಂಟು ಮಕ್ಕಳಿದ್ದಾರೆ ಎಂದರು.
ಜೆಡಿಎಸ್ ಗೆ ಮುಕ್ತ ಸ್ವಾಗತ- ಹೆಚ್.ಡಿ.ಕೆ
ಎಂಎಲ್ಸಿ ಸಿ.ಎಂ.ಇಬ್ರಾಹಿಂ ಜೊತೆ ನಾನು ಮಾತನಾಡಿದ್ದೇನೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತವಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಬ್ರಾಹಿಂ ಅವರು ದೇವೇಗೌಡರ ಜತೆ ಹಲವು ವರ್ಷಗಳ ಕಾಲ ಇದ್ದವರು. ಇತ್ತೀಚೆಗೆ ಇಬ್ರಾಹಿಂ ಜತೆ ಹಲವು ಬಾರಿ ಚರ್ಚಿಸಿದ್ದೇನೆ. ಪರಿಷತ್ ವಿಪಕ್ಷ ಸ್ಥಾನ ಕೊಟ್ಟರೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದೆ.
ಸಿ.ಎಂ.ಇಬ್ರಾಹಿಂಗೆ ಜೆಡಿಎಸ್ ಮೇಲೆ ವ್ಯಾಮೋಹವಿದೆ. ಅವರು ಪಕ್ಷಕ್ಕೆ ಬರುವುದಾದರೆ ಮುಕ್ತ ಆಹ್ವಾನವಿದೆ. ಇಂದು ಬೆಳಗ್ಗೆಯೂ ಸಿ.ಎಂ.ಇಬ್ರಾಹಿಂ ಜತೆ ಚರ್ಚಿಸಿದ್ದೇನೆ ಎಂದು ಕುಮಾರಸ್ವಾಮಿ ನುಡಿದಿದ್ದಾರೆ. ಇಂದು ಮಾತನಾಡಿದ್ದ ಸಿಎಂ ಇಬ್ರಾಹಿಂ ಕಾಂಗ್ರೆಸ್ನಿಂದ ದೂರಾಗುತ್ತಿರುವುದಾಗಿ ಘೋಷಿಸಿದ್ದರು. ಜನತಾ ಪರಿವಾರದ ನಾಯಕರು ಬಿಜೆಪಿ, ಕಾಂಗ್ರೆಸ್ನಲ್ಲಿ ಸೆಟಲ್ ಆಗಿಬಿಟ್ಟಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ನಾನು ಮಾಡುವುದಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.