ರಿಯಾದ್: ಕೋವಿಡ್ ಹಿನ್ನಲೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಭಾರತೀಯ ವಲಸಿಗರು ಎದುರಿಸುತ್ತಿರುವ ಪ್ರಯಾಣ ಬಿಕ್ಕಟ್ಟನ್ನು ಪರಿಹರಿಸಲು ಗರಿಷ್ಠ ಪ್ರಯತ್ನಗಳು ನಡೆಯುತ್ತಿವೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಔಸಾಫ್ ಸಯೀದ್ ಹೇಳಿದ್ದಾರೆ.
ಕೋವಿಡ್ ವಿರುದ್ಧ ಲಸಿಕೆ ಹಾಕಿದ ವಲಸಿಗರಿಗೆ ಭಾರತದಿಂದ ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಅವಕಾಶ ನೀಡುವಂತೆ ಸೌದಿ ಆರೋಗ್ಯ ಮತ್ತು ವಾಯುಯಾನ ಸಚಿವಾಲಯಗಳನ್ನು ಕೋರಿದ್ದೇನೆ ಮತ್ತು ಪರಿಹಾರದ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದರು.
ಅವರು ಜಿದ್ದಾದ ಭಾರತೀಯ ಕಾನ್ಸುಲೇಟ್ ಸಭಾಂಗಣದಲ್ಲಿ ಭಾರತೀಯ ಸಾಮಾಜಿಕ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದರು. ಭಾರತದ ಲಸಿಕೆ ಪ್ರಮಾಣಪತ್ರವನ್ನು ಸ್ವೀಕರಿಸಲು ಪ್ರಸ್ತುತ ಸೌದಿ ಅರೇಬಿಯಾ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸೌದಿ ಅಧಿಕಾರಿಗಳನ್ನು ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.