ಗ್ರಾಮಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಮೊಹಲ್ಲಾಗಳಲ್ಲಿ ಅನ್ಯೋನ್ಯತೆಗೆ ಧಕ್ಕೆ ತರುವಂತಹ ಘಟನೆಗಳು ನಡೆಯದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಹಾಗೂ ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ರಾಜ್ಯ ಪ್ರ.ಕಾರ್ಯದರ್ಶಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರು ಕರೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತಿರುತ್ತದೆ. ಚುನಾವಣೆಯಲ್ಲಿ ಸೋಲು ಹಾಗೂ ಗೆಲುವು ಸಹಜವಾಗಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ವಿವೇಚನೆಯಂತೆ ಮತಚಲಾಯಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ.
ಚುನಾವಣೆಗಳ ನೆಪದಲ್ಲಿ ಮೊಹಲ್ಲಾಗಳಲ್ಲಿ ಭಿನ್ನಮತ ಸೃಷ್ಟಿಯಾಗಬಾರದು. ಮೊಹಲ್ಲಾಗಳ ಅನ್ಯೋನ್ಯತೆ ಉಳಿಸುವ, ಸಾಮಾಜಿಕ ಸ್ವಾಸ್ಥ್ಯ ಹದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ.
ಗ್ರಾಮಗಳ ಅಭಿವೃದ್ಧಿಗಾಗಿ ಜಾತಿ-ಮತ-ಪಂಥ ಹಾಗೂ ಪಕ್ಷ ಗಳೆಲ್ಲಾ ಒಟ್ಟಾಗಿ ಕಾರ್ಯಪ್ರವೃತ್ತರಾಗುವಂತಾಗಬೇಕು. ಆ ಮೂಲಕ ಸಶಕ್ತ ದೇಶವನ್ನು ಕಟ್ಟಲು ಸಾಧ್ಯ. ದೇಶಕಟ್ಟುವ ಕಾರ್ಯದಲ್ಲಿ ವಿಜೇತರಂತೆಯೇ ಪರಾಜಿತರಿಗೂ ಜವಾಬ್ದಾರಿ ಇದೆ ಎಂದೂ ಅವರು ಪ್ರಕಟನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.