janadhvani

Kannada Online News Paper

ಎಸ್‌ವೈಎಸ್‌ ಕೌಂಟ್ 20: ಸಂಘಟನಾ ಕಾರ್ಯಾಚರಣೆಯಿಂದ ಬದುಕು ಯಶಸ್ಸು- ಡಿ ಕೆ ಉಮರ್ ಸಖಾಫಿ

ವಿಟ್ಲ :- ಯಾವುದೇ ಕಾರ್ಯಕ್ರಮಗಳ ಯಶಸ್ವಿಗಾಗಿ ಸಂಘಟಿತರಾಗುವುದು ಅಗತ್ಯವಾಗಿದೆ. ಇಸ್ಲಾಮಿನಲ್ಲಿ ಸಂಘಟಿತ ಕಾರ್ಯಾಚರಣೆಗೆ ದುಪ್ಪಟ್ಟು ಪ್ರತಿಫಲವು ಸಿಗಲಿದೆ. ಪವಿತ್ರ ಕುರ್ಆನ್ ಮತ್ತು ಹದೀಸ್ ಗಳಲ್ಲಿ ಸಂಘಟಿಸುವುದರ ಮಹತ್ವಗಳನ್ನು ವಿವಿಧ ಕಡೆಗಳಲ್ಲಿ ವಿವರಿಸಲಾಗಿದೆ.

ಆದುದರಿಂದ ಸುನ್ನೀ ಸಂಘಟನೆಗಳಲ್ಲಿ ಒಟ್ಟು ಸೇರಿ ಸಂಘಟಿತರಾಗಿ ಕಾರ್ಯಾಚರಿಸುತ್ತಾ ಸಮಾಜಸೇವೆಗೆ ಇಳಿಯುವ ಮೂಲಕ ತಮ್ಮ ಇಹಪರ ಜೀವನವನ್ನು ಹಸನಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟುರವರು ಹೇಳಿದರು.

ಅವರು ಮಂಗಳಪದವು ಬುಸ್ತಾನುಲ್ ಉಲೂಂ ಮದ್ರಸಃ ಹಾಲ್‌ನಲ್ಲಿ ನಡೆದ ಎಸ್‌ವೈಎಸ್ ವಿಟ್ಲ ಸೆಂಟರ್ ಸಮಿತಿಯ ಕೌಂಟ್ ಟ್ವೆಂಟಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.

ಸೆಂಟರ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಾಮಿಲ್ ಸಖಾಫಿ ಕಡಂಬುರವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಆಧ್ಯಾತ್ಮಿಕ ನಾಯಕರಾದ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕರವರು ಸಭೆಯನ್ನು ಉದ್ಘಾಟಿಸಿದರು.
ರಾಜ್ಯ ಸಮಿತಿಯ ಆದೇಶದಂತೆ ಆಯೋಜಿಸಲಾಗಿದ್ದ ಸೆಂಟರ್ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆಯಲ್ಲಿ ಸಮಿತಿಯ ಅಧೀನದಲ್ಲಿರುವ 18 ಬ್ರಾಂಚ್ ಗಳಿಂದ ಆಯ್ಕೆಗೊಂಡ ನೂರಕ್ಕಿಂತಲೂ ಅಧಿಕ ಕೌನ್ಸಿಲರ್ ಗಳು ಭಾಗವಹಿಸಿದ್ದರು. ಎಸ್‌ವೈಎಸ್ ಸಂಘಟನೆಯಲ್ಲಿ ಅತ್ಯುತ್ತಮ ಕಾರ್ಯಾಚರಣೆ ಮೂಲಕ ಗುರುತಿಸಿಕೊಂಡ ಕಂಬಳಬೆಟ್ಟು ಬ್ರಾಂಚ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷರಾದ ಕೆ ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಸೆಂಟರ್ ಕೋಶಾಧಿಕಾರಿ ಮುಸ್ತಫಾ ಕೋಡಪದವು, ಉಪಾಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್ ಟಿಪ್ಪುನಗರ, ಸುನ್ನೀ ಕೋ ಆರ್ಡಿನೇಷನ್ ವಿಟ್ಲ ವಲಯ ಜನರಲ್ ಕನ್ವೀನರ್ ಇಬ್ರಾಹೀಂ ಮದನಿ ಕಂಬಳಬೆಟ್ಟು, ಕಾಸಿಂ ಸಖಾಫಿ ಕೊಳಂಬೆ ಮೊದಲಾದವರು ಮಾತನಾಡಿದರು.
ಸ್ಥಳೀಯ ಜಮಾಅತ್ ಸಮಿತಿ ಅಧ್ಯಕ್ಷರಾದ ಕಲಂದರ್, ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಾಹೇಬ್, ಎಸ್‌ವೈಎಸ್ ನಾಯಕರಾದ ವಿಕೆ ಅಬ್ದುಲ್ ರಹ್ಮಾನ್ ಸಖಾಫಿ ಬಿಎಸ್ ಅಬ್ದುಲ್ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.
ಸೆಂಟರ್ ಉಸ್ತುವಾರಿಯಾದ ಅಬ್ದುಲ್ ಹಮೀದ್ ಸಖಾಫಿ ಪಾಡಿಯವರು ವೀಕ್ಷಕರಾಗಿ ಆಗಮಿಸಿ ಕಾರ್ಯಕ್ರಮವನ್ನು ನಿಯಂತ್ರಿಸಿದರು.

ಸ್ಥಳೀಯ ಇಮಾಂ ಅಬ್ದುಲ್ ಸಲಾಂ ಅಮ್ಜದಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಸೆರ್ಕಳ ಸ್ವಾಗತಿಸಿದರು. ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜ, ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ಮತ್ತು ಸಿಎಚ್ ಅಬ್ದುಲ್ ಖಾದರ್ ಕೊಡಂಗಾಯಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೊನೆಯಲ್ಲಿ ಸೆಂಟರ್ ಇಸಾಬಃ ಕಾರ್ಯದರ್ಶಿ ವಿಎಂ ಅಬ್ದುರ್ರಹೀಂ ಸಖಾಫಿ ವಿಟ್ಲರವರು ಧನ್ಯವಾದ ಸಲ್ಲಿಸಿದರು.

ವರದಿ : ಕೊಡಂಗಾಯಿ ಕಾಮಿಲ್ ಸಖಾಫಿ

error: Content is protected !! Not allowed copy content from janadhvani.com