janadhvani

Kannada Online News Paper

ತಾಜುಲ್ ಫುಖಹಾಅ್ ‘ಬೇಕಲ್ ಉಸ್ತಾದ್’ ವಫಾತ್

ಮಂಗಳೂರು: ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರು, ಉಡುಪಿ,ಚಿಕ್ಕಮಂಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ, ಕೇಂದ್ರ ಮುಶಾವರ ಸದಸ್ಯರು ತಾಜುಲ್ ಫುಖಹಾಅ್ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ‘ಬೇಕಲ್ ಉಸ್ತಾದ್’ (71) ವಫಾತಾದರು.

ದೇವಬಂದ್ ಅರಬಿಕ್ ಕಾಲೇಜಿನಿಂದ ಪದವಿ ಪಡೆದಿದ್ದ ಅವರು, ಸೂರಿಂಜೆ ಮತ್ತು ಬಂಟ್ವಾಳದ ಜುಮಾ ಮಸೀದಿಗಳಲ್ಲಿ ತಲಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಸುದೀರ್ಘ 43 ವರ್ಷಗಳಿಂದ ಬೇಕಲದಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುವ ಮೂಲಕ ‘ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ ಅವರು ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರು, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಫೂಡಲ್ ಎಂಬಲ್ಲಿನ ಮುಹಮ್ಮದ್ ಮತ್ತು ಖದೀಜಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ್ದ ಅವರು ನರಿಂಗಾನ ಗ್ರಾಮದ ಡಿಜಿ ಕಟ್ಟೆಯ ಶಾಲೆಯಲ್ಲಿ 7ನೆ ತರಗತಿ ಕಲಿತ ಬಳಿಕ ಧಾರ್ಮಿಕ ವಿದ್ಯಾಭ್ಯಾಸ ಕಲಿಯಲು ಆಸಕ್ತಿ ವಹಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದು ಪಡೆದಿದ್ದಾರೆ.

ಅವರು ಕರ್ಮಶಾಸ್ತ್ರ, ಖಗೋಳಶಾಸ್ತ್ರದ ಬಗ್ಗೆ ಉನ್ನತ ಜ್ಞಾನ ಹೊಂದಿದ್ದರು.ಕರ್ನಾಟಕದ ಹೆಮ್ಮೆಯಾಗಿದ್ದ ಶೈಖುನಾ, ಧಾರ್ಮಿಕ ಕ್ಷೇತ್ರದ ಅಧಿಕೃತ ಧ್ವನಿಯಾಗಿದ್ದರು. ಉಸ್ತಾದರ ವಫಾತ್ ಅಕ್ಷರಶಃ ಸುನ್ನತ್ ಜಮಾಅತ್’ಗೆ ತುಂಬಲಾರದ ನಷ್ಟವಾಗಿದೆ.

ಕರ್ನಾಟಕ ಸುನ್ನೀ ಆನ್‌ಲೈನ್ ಕ್ಲಾಸ್‌ರೂಮ್ KSOCR ಮತ್ತು ಜನಧ್ವನಿ ಬಳಗ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

error: Content is protected !! Not allowed copy content from janadhvani.com