janadhvani

Kannada Online News Paper

ಸೌದಿಯಿಂದ ‘ವಂದೇ ಭಾರತ್’ ಮುಂದುವರಿಕೆ- ಏರ್ ಇಂಡಿಯಾ ಎಕ್ಸ್‌ಪ್ರೆಸ್

ನವದೆಹಲಿ,ಸೆ.23: ಸೌದಿ ಅರೇಬಿಯಾದಿಂದ ಭಾರತಕ್ಕೆ ವಂದೇ ಭಾರತ್ ವಿಮಾನಯಾನ ಮುಂದುವರಿಯಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ. ಆದರೆ ಭಾರತದಿಂದ ಸೌದಿಗೆ ಪ್ರಯಾಣಿಕರನ್ನು ಕೊಂಡೊಯ್ಯಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ವಿಮಾನಯಾನ ಸೇವೆಯನ್ನು ರದ್ದು ಪಡಿಸಿರುವುದಾಗಿ ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ವಿಮಾನಯಾನ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆಯನ್ನು ನೀಡಿದೆ.
ಸೌದಿ ಅರೇಬಿಯಾದ ಈ ನಿರ್ಧಾರದಿಂದ ರಜೆಯಲ್ಲಿ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದವರು, ಕೆಲಸ ಕಳೆದುಕೊಂಡವರು, ಊರಿನಿಂದ ಸೌದಿಗೆ ಮರಳಲು ತಯಾರಿ ನಡೆಸುತ್ತಿದ್ದವರು ತೊಂದರೆಗೀಡಾಗಿದ್ದಾರೆ.

ಇತರ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಭೇಟಿ ನೀಡುವವರು ಭೇಟಿಯ ಹಿಂದಿನ 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿರಬಾರದು ಎಂಬ ಶರತ್ತನ್ನು ವಿಧಿಸಲಾಗಿದೆ. ಈ ನಿಟ್ಟಿನಲ್ಲಿ ದುಬೈ ಮತ್ತಿತರ ಕೊಲ್ಲಿ ರಾಷ್ಟ್ರಗಳಿಗೆ ತೆರಳಿ, ಆ ಮೂಲಕ ಸೌದಿಗೆ  ಪ್ರಯಾಣಿಸಲು ಇಚ್ಛಿಸುವವರು ಅಲ್ಲಿ 14 ದಿನ ಉಳಿದ ಬಳಿಕವಷ್ಟೇ ಸೌದಿಗೆ ಪ್ರಯಾಣಿಸಲು ಸಾಧ್ಯವಾಗಲಿದೆ.

error: Content is protected !! Not allowed copy content from janadhvani.com