janadhvani

Kannada Online News Paper

ಜಿನೇವಾ: ಜಗತ್ತನ್ನೇ ಸ್ತಬ್ಧಗೊಳಿಸಿರುವ ಕೊರೊನಾ ವೈರಸ್ ಸೋಂಕಿಗೆ ಶುಕ್ರವಾರದ ವೇಳೆಗೆ ವಿಶ್ವದಾದ್ಯಂತ 1,00,376 ಜನ ಮೃತಪಟ್ಟಿದ್ದಾರೆ. 16.19 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಅವಧಿಪೂರ್ವ ತೆರವು ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದೆ.

ಲಾಕ್‌ಡೌನ್‌ ಅವಧಿಪೂರ್ವ ತೆರವು ಮಾರಕ ಕೊರೊನಾ ವೈರಸ್‌ ಹರಡುವಿಕೆಯ ಪುನರುತ್ಥಾನಕ್ಕೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ.

ಕೆಲವು ದೇಶಗಳು ನಿರ್ಬಂಧಗಳನ್ನು ತೆರವುಗೊಳಿಸುವ ಮಾರ್ಗಗಳ ಬಗ್ಗೆ ಆಲೋಚಿಸುತ್ತಿವೆ. ತುಂಬಾ ಬೇಗನೇ ಲಾಕ್‌ಡೌನ್ ತೆರವುಗೊಳಿಸುವುದು ಅಪಾಯಕಾರಿ ಎಂದು WHO ಮಹಾ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

‘ಮನೆಯಲ್ಲೇ ಇರಿ ಎಂದು ವಿಧಿಸಲಾಗಿರುವ ನಿರ್ಬಂಧಗಳನ್ನು ತೆರವುಗೊಳಿಸಲು ಕೆಲವು ದೇಶಗಳು ಮುಂದಾಗಿರುವುದು ನನಗೆ ತಿಳಿದಿದೆ. ಆದರೆ, ಸರಿಯಾಗಿ ನಿರ್ವಹಿಸದೇ ಹೋದರೆ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗಲಿದೆ. ನಿರ್ಬಂಧಗಳನ್ನು ಕ್ರಮೇಣ ಮತ್ತು ಸುರಕ್ಷಿತವಾಗಿ ತೆರವುಗೊಳಿಸುವ ತಂತ್ರಗಳ ಕುರಿತು ಕೊರೊನಾದಿಂದ ಅತಿಹೆಚ್ಚು ಸಮಸ್ಯೆಗೆ ಈಡಾಗಿರುವ ರಾಷ್ಟ್ರಗಳ ಜತೆ ಡಬ್ಲ್ಯುಎಚ್‌ಒ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ನಿರ್ಬಂಧಗಳನ್ನು ತೆರವುಗೊಳಿಸುವ ಮುನ್ನ ಆರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

  1. ಸೋಂಕು ಹರಡುವಿಕೆ ನಿಯಂತ್ರಣ.
  2. ಸಾರ್ವಜನಿಕ ಆರೋಗ್ಯ ಸೇವೆಗಳ ಲಭ್ಯತೆ.
  3. ಕ್ವಾರಂಟೈನ್ ಕೇಂದ್ರಗಳಲ್ಲಿ ಔಟ್‌ಬ್ರೇಕ್‌ ಅಪಾಯ ಕಡಿಮೆ ಇರುವಂತೆ ನೋಡಿಕೊಳ್ಳುವುದು.
  4. ಕೆಲಸದ ಸ್ಥಳಗಳು ಮತ್ತು ಶಾಲೆಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳು.
  5. ಬೇರೆಡೆಗಳಿಂದ ವೈರಸ್ ಬರದಂತೆ ತಡೆಯಲು ಕ್ರಮಗಳು.
  6. ಸಮುದಾಯಗಳಲ್ಲಿ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸ.

ಇವಿಷ್ಟು ಅಂಶ ಗಮನದಲ್ಲಿಟ್ಟುಕೊಂಡು ಮತ್ತು ಈ ವಿಚಾರಗಳಲ್ಲಿ ಸಿದ್ಧತೆ ಮಾಡಿಕೊಂಡೇ ನಿರ್ಬಂಧಗಳನ್ನು ತೆರವುಗೊಳಿಸಬಹುದು ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.

error: Content is protected !! Not allowed copy content from janadhvani.com