ಡೆಹ್ರಾಡೂನ್: ಮೋಟಾರು ವಾಹನ ಕಾಯ್ದೆಯಡಿ ಎತ್ತಿನ ಗಾಡಿ ಮಾಲೀಕನಿಗೆ ಪೊಲೀಸರು 1,000 ರೂ ದಂಡ ವಿಧಿಸಿದ್ದಾರೆ. ಮೊಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲು ಅವಕಾಶವಿಲ್ಲ ಎಂಬುದು ನಂತರ ಅರಿತುಕೊಂಡ ಪೊಲೀಸರು ದಂಡವನ್ನು ಮತ್ತೆ ರದ್ದುಗೊಳಿಸಿದರು. ಡೆಹ್ರಾಡೂನ್ನ ಹೊರವಲಯದಲ್ಲಿರುವ ಸಹಸ್ಪುರದ ಚಾರ್ಬಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎತ್ತಿನ ಗಾಡಿ ಮಾಲೀಕ ರಿಯಾಝ್ ಹಸನ್ ತನ್ನ ಜಮೀನಿನ ಬಳಿ ಗಾಡಿಯನ್ನು ನಿಲ್ಲಿಸಿದ್ದ, ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಬ್ ಇನ್ಸ್ಪೆಕ್ಟರ್ ಪಂಕಜ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಈ ವಾಹನವನ್ನು ರಾತ್ರಿ ಪತ್ತೆ ಹಚ್ಚಿದ್ದು, ಸ್ಥಳೀಯರಲ್ಲಿ ಇದರ ಬಗ್ಗೆ ವಿಚಾರಿಸಿದಾಗ, ಅದು ರಿಯಾಝ್ ಅವರಿಗೆ ಸೇರಿದ್ದು ಎಂಬುದು ಕಂಡು ಬಂದಿತ್ತು. ತರುವಾಯ ಎಂವಿ ಕಾಯ್ದೆಯ ಸೆಕ್ಷನ್ 81ರ ಅಡಿಯಲ್ಲಿ 1,000 ರೂ. ದಂಡ ವಿಧಿಸಿದ ಪೊಲೀಸರು ಪಚೀತಿಗೆ ಸಿಲುಕಿದ್ದರು.
ತನ್ನ ವಾಹನವನ್ನು ತನ್ನ ಸ್ವಂತ ಮೈದಾನದ ಹೊರಗೆ ನಿಲ್ಲಿಸಿದ್ದಕ್ಕಾಗಿ ಹೇಗೆ ದಂಡ ವಿಧಿಸಿದ್ದೀರಿ ಎಂದು ರಿಯಾಝ್ ಪೊಲೀಸರಿಗೆ ಕೇಳಿದ್ದಾರೆ. ಎತ್ತುಗಾಡಿಯು ಎಂವಿ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಎಂವಿ ಕಾಯ್ದೆಯಡಿ ದಂಡವನ್ನು ಏಕೆ ವಿಧಿಸಲಾಗಿದೆ ಎಂದು ಅವರು ಕೇಳಿದಾಗ, ತಪ್ಪನ್ನು ಮನಗಂಡ ಪೊಲೀಸರು ಚಲನನ್ನು ರದ್ದುಗೊಳಿಸಿದ್ದಾರೆ.
ಅದು ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವಾಗಿದ್ದು, ಮರಳು ಸಾಗಿಸಲು ಎತ್ತುಗಾಡಿಯನ್ನು ಬಳಸುವುದು ಸಾಮಾನ್ಯವಾಗಿದೆ. ಈ ಉದ್ದೇಶಕ್ಕಾಗಿ ರಿಯಾಝ್ನ ಎತ್ತು ಗಾಡಿಯನ್ನು ಬಳಸಲಾಗುತ್ತಿದೆ ಎಂದು ಪೊಲೀಸರು ಶಂಕಿಸಿ, ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಐಪಿಸಿ ಅಡಿಯಲ್ಲಿ ದಂಡ ವಿಧಿಸುವ ಬದಲು ಎಂವಿ ಕಾಯ್ದೆ ಮೂಲಕ ದಂಡ ವಿಧಿಸಿದ್ದು ಈ ವಿದ್ಯಮಾನಗಳಿಗೆ ಕಾರಣವಾಯಿತು ಎನ್ನಲಾಗಿದೆ.