ನವದೆಹಲಿ: ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ವಾಹನಗಳ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಅಶೋಕ್ ಲೇಲ್ಯಾಂಡ್ ವಾಹನ ತಯಾರಕ ಕಂಪನಿಯ ಪ್ರಧಾನ ಕಚೇರಿ ಶುಕ್ರವಾರದಿಂದ ಐದು ದಿನಗಳ ಕಾಲ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದೆ.
ದೇಶದ ಮೂರನೇ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕ ಕಂಪನಿಯಾಗಿರುವ ಲೇಲ್ಯಾಂಡ್, ಗುರುವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಿರಂತರವಾಗಿ ವಾಣಿಜ್ಯ ವಾಹನಗಳ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದ್ದು, ಕಂಪನಿಯ ರಕ್ಷಣಾ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ಸಾಮಾನ್ಯ ರಜಾ ದಿನವಾದ ಭಾನುವಾರ ಸೇರಿದಂತೆ 06 ರಿಂದ 11ನೇ ದಿನಾಂಕದವರೆಗೂ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.
ದೇಶದಲ್ಲಿರುವ 8,296 ಲೇಲ್ಯಾಂಡ್ ಘಟಕಗಳಲ್ಲಿ ಆಗಸ್ಟ್ ತಿಂಗಳಲ್ಲಿ ವಾಹನ ಮಾರಾಟವೂ ಶೇ.50 ರಷ್ಟು ಕುಸಿದಿದೆ ಎಂದು ಅಶೋಕ್ ಲೇಲ್ಯಾಂಡ್ ವರದಿ ನೀಡಿದೆ.
ಇದಕ್ಕೂ ಮುನ್ನ ಮಾರುತಿ ಸುಜುಕಿ ಎರಡು ದಿನಗಳಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು, ಗುರುಗ್ರಾಮ ಮತ್ತು ಮಿನೇಸಾರ್ನಲ್ಲಿರುವ ಉತ್ಪಾದನ ಘಟಕಗಳಲ್ಲಿ ಸೆ.7 ರಿಂದ 9ರವರೆಗೆ ಸ್ಥಗಿತಗೊಳಿಸುವುದಾಗಿ ಮೊದಲೇ ಹೇಳಿದೆ.
ದಾಖಲೆ ಪ್ರಮಾಣದಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಈ ನಿರ್ಧಾರ ತೆಗೆದುಕೊಂಡಿದೆ. ಆಗಸ್ಟ್ ತಿಂಗಳಲ್ಲಿ ಶೇ. 33.90 ರಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಉತ್ಪಾದನೆಯನ್ನು ಸತತ ಏಳನೇ ತಿಂಗಳು ಕಡಿತಗೊಳಿಸಿದೆ.
ದೇಶದಲ್ಲಿ ಆಟೋ ಮೊಬೈಲ್ ವಲಯವೂ ತುಂಬಾ ಮಂದಗತಿಯಲ್ಲಿ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಕುಸಿಯುತ್ತಿದೆ. ಪರಿಸ್ಥಿತಿ ಸುಧಾರಿಸಲು ಸರ್ಕಾರದಿಂದ ಸಾಧ್ಯವಾದಷ್ಟು ಬೆಂಬಲ ನೀಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಜಿಎಸ್ಟಿ ವಿಚಾರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಚರ್ಚಿಸಿ ಬೇಡಿಕೆ ಮುಂದಿಡುವುದಾಗಿ ತಿಳಿಸಿದ್ದಾರೆ.
ವಾಣಿಜ್ಯ ವಾಹನಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಮುಂದಿನ ಮೂರು ತಿಂಗಳಲ್ಲಿ ಸುಮಾರು 5 ಲಕ್ಷ ಕೋಟಿ ರೂ. ಮೌಲ್ಯದ 68 ರಸ್ತೆ ಯೋಜನೆಗಳನ್ನು ಸಾರಿಗೆ ಸಚಿವಾಲಯದಿಂದ ನೀಡುವುದಾಗಿ ಗಡ್ಕರಿ ಭರವಸೆ ನೀಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ತೆರಿಗೆ ಇಳಿಕೆ ಮಾಡಬೇಕೆಂಬುದು ನಿಮ್ಮ ಬೇಡಿಕೆಯಾಗಿದೆ. ನಿಮ್ಮ ಸಲಹೆ ಉತ್ತಮವಾಗಿದೆ. ಈ ಸಂದೇಶವನ್ನು ನಾನು ನಿರ್ಮಲಾ ಸೀತಾರಾಮನ್ ಬಳಿ ತೆಗೆದುಕೊಂಡು ಹೋಗುತ್ತೇನೆ. ಸ್ವಲ್ಪ ಸಮಯದವರೆಗೆ ಜಿಎಸ್ಟಿ ಇಳಿಕೆಯಾದರೆ, ನಿಮಗೆ ಸಹಾಯವಾಗಲಿದೆ ಎಂದು ವಾರ್ಷಿಕ ಎಸ್ಐಎಎಂ ಕನ್ವೆನ್ಸನ್ನಲ್ಲಿ ವಾಹನ ಕಂಪನಿಗಳಿಗೆ ತಿಳಿಸಿದರು.