janadhvani

Kannada Online News Paper

ಸಮೀಕ್ಷೆಗಳಲ್ಲಿ ಬಹುಮತ: ಸಣ್ಣ ಪುಟ್ಟ ಪಕ್ಷಗಳನ್ನು ಸೆಳೆಯಲು ಮೋದಿಯ ತಂತ್ರ- ಸಿಎಂ

ಬೆಂಗಳೂರು: ಕೇಂದ್ರದಲ್ಲಿ ಸರ್ಕಾರ ರಚಿಸಲು ಎದುರಾಗಬಹುದಾದ ಸ್ಥಾನಗಳ ಕೊರತೆಗಳನ್ನು ಸಣ್ಣ ಪುಟ್ಟ ಪಕ್ಷಗಳನ್ನು ಸೆಳೆಯುವ ಮೂಲಕ ತುಂಬಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಮೀಕ್ಷೆಗಳೆಂಬ ತಂತ್ರ ಹೆಣೆದಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಮತಯಂತ್ರ ಅಕ್ರಮ, ಸಮೀಕ್ಷೆ ಕುರಿತು ಇಂದು ಸರಣಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು, ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ನರೇಂದ್ರ ಮೋದಿ ಆಡಳಿತದಲ್ಲಿ ಮತಯಂತ್ರಗಳ ಅಕ್ರಮದ ಬಗ್ಗೆ ಬಹುತೇಕ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿರುವ ವಿಪಕ್ಷಗಳು, ಚುನಾವಣೆ ಆಕ್ರಮ ತಡೆಯುವ ಸಲುವಾಗಿ ಸಾಂಪ್ರದಾಯಿಕ ಮತಪತ್ರಗಳನ್ನೇ ಜಾರಿಗೆ ತರುವಂತೆ ಮನವಿ ಮಾಡಿವೆ. ಜಗತ್ತಿನಾದ್ಯಂತ ಈಗಲೂ ಮತ ಪತ್ರಗಳ ಮೂಲಕವೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮುಂದುವರಿದ ದೇಶಗಳೂ ಇನ್ನೂ ಮತಪತ್ರ ವ್ಯವಸ್ಥೆಯನ್ನೇ ಹೊಂದಿವೆ.

ಮೇ.19ರಂದು ಪ್ರಕಟವಾದ ಚುನಾವಣೆ ಮತಗಟ್ಟೆ ಸಮೀಕ್ಷೆಯೂ ಮತಯಂತ್ರಗಳ ಅಕ್ರಮದ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆಗಳನ್ನು ಮೋದಿ ಅವರೇ ಮಾಡಿಸಿದ್ದಾರೆ. ಈ ರೀತಿಯ ತಂತ್ರಗಳ ಮೂಲಕ ಸಣ್ಣಪುಟ್ಟ ಪಕ್ಷಗಳನ್ನು ತಮ್ಮತ್ತ ಸೆಳೆದು ಕೊರತೆ ತುಂಬಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ.

ತಮ್ಮ ಪರವಾದ ವಾತಾವರಣವಿದೆ ಎಂಬ ಸುಳ್ಳು ಅಲೆ ಸೃಷ್ಟಿಸಲು ಈ ಸಮೀಕ್ಷೆಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಇವು ಎಕ್ಸಿಟ್‌ ಪೋಲ್‌ಗಳೇ (ಮತಗಟ್ಟೆ ಸಮೀಕ್ಷೆಗಳು) ಹೊರತು, ಎಕ್ಸಾಕ್ಟ್‌ (ನಿಖರ) ಪೋಲ್‌ಗಳಲ್ಲ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ.

error: Content is protected !! Not allowed copy content from janadhvani.com