janadhvani

Kannada Online News Paper

ಒಡಿಶಾ: ಫನಿ ಅಬ್ಬರಕ್ಕೆ 6 ಮಂದಿ ಬಲಿ,ರಕ್ಷಣಾ ಕಾರ್ಯಕ್ಕೆ 1000 ಕೋಟಿ ರೂ. ಪರಿಹಾರ ಘೋಷಣೆ

ನವದೆಹಲಿ,(ಮೇ 03): ಒಡಿಶಾದ ಪುರಿ ಕಡಲತೀರಕ್ಕೆ ಫನಿ ಅಪ್ಪಳಿಸಿದೆ. ಪುರಿ ಜಿಲ್ಲೆಯಲ್ಲಿ ಫನಿ ಅಬ್ಬರಕ್ಕೆ 6 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಫನಿ ರಕ್ಷಣಾ ಕಾರ್ಯಕ್ಕೆ 1000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಲಕ್ಷಾಂತರ ಕುಟುಂಬಗಳು ಮನೆ ಕಳೆದುಕೊಂಡಿವೆ. ತಕ್ಷಣಕ್ಕೆ 1000 ಕೋಟಿ ಪರಿಹಾರ ಬಿಡುಗಡೆ ಮಾಡಿದ್ದೇವೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಫನಿ ಚಂಡಮಾರುತ ಕುರಿತು ಪ್ರಧಾನಿ ಮೋದಿ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಗಂಟೆಗೆ 200 ಕಿಮೀ ವೇಗದಲ್ಲಿ ಫನಿ ಸೈಕ್ಲೋನ್ ಆರ್ಭಟಿಸುತ್ತಿದ್ದು. ಚಂಡಮಾರುತದ ಅಬ್ಬರಕ್ಕೆ ಮರಗಳು ಧರೆಗುರುಳುತ್ತಿವೆ. ಮುಂಜಾಗ್ರತೆಯಿಂದ ಒಟ್ಟು 11 ಲಕ್ಷ ಜನರ ಸ್ಥಳಾಂತರ ಮಾಡಲಾಗಿದ್ದು, ಶಾಲಾ, ಕಾಲೇಜುಗಳಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ.

ಚಂಡಮಾರುತದಿಂದ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಜನ ಆತಂಕದಲ್ಲಿದ್ದಾರೆ. ಒಡಿಶಾದ 11 ಜಿಲ್ಲೆಗಳ 10 ಸಾವಿರ ಗ್ರಾಮಗಳಲ್ಲಿ ಫನಿ ಅಬ್ಬರ ಹೆಚ್ಚಾಗಿದ್ದು, 91 NDRF, 8 ಕೋಸ್ಟಲ್ ಗಾರ್ಡ್ ತಂಡಗಳನ್ನ ನಿಯೋಜಿಸಲಾಗಿದೆ. ಇನ್ನು, ಭುವನೇಶ್ವರ, ಕೋಲ್ಕತಾ ಏರ್ಪೋರ್ಟ್ ಬಂದ್ ಆಗಿದ್ದು. 157ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತವಾಗಿದೆ. ಕಳೆದ 20 ವರ್ಷಗಳಲ್ಲೇ ಒಡಿಶಾ ಕಂಡಂತಹ ಅತ್ಯಂತ ಭೀಕರ ಚಂಡಮಾರುತ ಇದಾಗಿದೆ.

error: Content is protected !! Not allowed copy content from janadhvani.com