ತಿರುವನಂತಪುರಂ: ಲಹರಿ (ಮಾದಕ ದ್ರವ್ಯ) ಮಾಫಿಯಾ ವಿರುದ್ಧ ಕೇರಳ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದರ ಭಾಗವಾಗಿ ಆರಂಭಿಸಲಾದ ‘ಆಪರೇಷನ್ ತೂಫಾನ್’ ಕಾರ್ಯಾಚರಣೆಯ ಮೊದಲ ದಿನವೇ ಭರ್ಜರಿ ಯಶಸ್ಸು ಸಿಕ್ಕಿದೆ. ರಾಜ್ಯಾದ್ಯಂತ ನಡೆಸಿದ ದಾಳಿಯಲ್ಲಿ 137 ಜನರನ್ನು ಬಂಧಿಸಲಾಗಿದ್ದು, ಒಟ್ಟು 104 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವೇಳೆ ಸುಮಾರು 500 ಗ್ರಾಂ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕ, ಆಂಧ್ರದಿಂದ ಕೇರಳಕ್ಕೆ ಡ್ರಗ್ಸ್ ಸರಬರಾಜು
ಕೇರಳಕ್ಕೆ ಎಂಡಿಎಂಎ ಮುಖ್ಯವಾಗಿ ಕರ್ನಾಟಕ ಮತ್ತು ವಿದೇಶಗಳಿಂದ ಸರಬರಾಜಾಗುತ್ತಿದೆ ಹಾಗೂ ಗಾಂಜಾ ಆಂಧ್ರಪ್ರದೇಶ ಮತ್ತು ಒಡಿಶಾದಿಂದ ಬರುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರವಾಡ ಚಂದ್ರಶೇಖರ್ ತಿಳಿಸಿದ್ದಾರೆ. ಮಾದಕ ದ್ರವ್ಯ ತಡೆಗೆ ವಿಮಾನ ನಿಲ್ದಾಣಗಳಲ್ಲಿ ಇನ್ನು ಮುಂದೆ ಕಣ್ಗಾವಲು ಮತ್ತಷ್ಟು ಬಲಪಡಿಸಲಾಗುವುದು. ಪ್ರಸ್ತುತ ಮೊದಲ ದಿನ ವಶಪಡಿಸಿಕೊಂಡಿರುವ ಒಟ್ಟು ಎಂಡಿಎಂಎ ಮಾರುಕಟ್ಟೆ ಮೌಲ್ಯ ಸುಮಾರು 30 ಲಕ್ಷ ರೂಪಾಯಿ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊಚ್ಚಿ, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಿಂದ ವಾಣಿಜ್ಯ ಪ್ರಮಾಣದಲ್ಲಿ (Commercial quantity) ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಜಾಲದ ವಿರುದ್ಧ ಅಂತರರಾಜ್ಯ ಮಟ್ಟದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಮತ್ತು ನೆರೆ ರಾಜ್ಯಗಳೊಂದಿಗೆ ಈ ಕುರಿತು ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು ಎಂದು ಡಿಜಿಪಿ ತಿಳಿಸಿದರು.
“ಹಲವು ಬಾರಿ ಡ್ರಗ್ಸ್ ದಂಧೆಯ ಮುಖ್ಯ ಸೂತ್ರಧಾರರನ್ನು (ಕಿಂಗ್ಪಿನ್) ಹಿಡಿಯುವುದು ಸವಾಲಾಗಿ ಪರಿಣಮಿಸುತ್ತದೆ. ಆದರೆ ಈ ಬಾರಿ ಅಂತಹ ಎಲ್ಲಾ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಿ ತನಿಖೆಯನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ” ಎಂದು ಡಿಜಿಪಿ ರವಾಡ ಚಂದ್ರಶೇಖರ್ ಹೇಳಿದರು.
ಫ್ಲಾಟ್ ಮೇಲೆ ದಾಳಿ: ಮೂವರ ಬಂಧನ, ಲಕ್ಷಾಂತರ ಮೌಲ್ಯದ ಡ್ರಗ್ಸ್ ಜಪ್ತಿ
ಕಾರ್ಯಾಚರಣೆಯ ಭಾಗವಾಗಿ ಕಾಕ್ಕನಾಡ್ನ ಕೊಲ್ಲಂಕುಡಿಮುಗಲ್ನಲ್ಲಿರುವ ‘ಅಲ್ಟಿಮಾ’ ಫ್ಲಾಟ್ ಮೇಲೆ ಡ್ಯಾನ್ಸಾಫ್ (DANSAF) ತಂಡ ವಿಶೇಷ ದಾಳಿ ನಡೆಸಿದೆ. ಈ ವೇಳೆ 437 ಗ್ರಾಂ ಎಂಡಿಎಂಎ ಜೊತೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು:
- ಆಷಿಫ್ (36) – ಕಳಮಶ್ಶೇರಿ ನಿವಾಸಿ
- ಅರ್ಜುನ್ (30) – ಪಾಲಕ್ಕಾಡ್ ನಿವಾಸಿ
- ರತೀಶ್ (33) – ಕಾಸರಗೋಡು ನಿವಾಸಿ
ಈ ನಿರ್ದಿಷ್ಟ ಫ್ಲಾಟ್ನಿಂದ ಜಪ್ತಿ ಮಾಡಲಾದ ಎಂಡಿಎಂಎ ಮೌಲ್ಯ ಸುಮಾರು 14 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಆರೋಪಿಗಳ ಫ್ಲಾಟ್ನಿಂದ 1 ಲಕ್ಷ ರೂಪಾಯಿ ನಗದನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಇತ್ತೀಚೆಗೆ ಜಮೆಯಾಗಿರುವ ದೊಡ್ಡ ಮೊತ್ತದ ಹಣದ ಮೂಲ ಮತ್ತು ಅವರ ನೆಟ್ವರ್ಕ್ ಕುರಿತು ಡ್ಯಾನ್ಸಾಫ್ ತಂಡ ತೀವ್ರ ತನಿಖೆ ನಡೆಸುತ್ತಿದೆ.















ಇನ್ನಷ್ಟು ಸುದ್ದಿಗಳು
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಎಸ್. ಬಂಪರ್ ಕೊಡುಗೆ
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ- ಡಾ. ಜಿ. ಪರಮೇಶ್ವರ್ ಡಿಸಿಎಂ
ದೆಹಲಿ ಹೋಟೆಲ್ನಲ್ಲಿ ಭೀಕರ ಅಗ್ನಿ ದುರಂತ- 21 ಮಂದಿ ಮೃತ್ಯು
ಸೌದಿ: ಭಾರತದ ನೂತನ ರಾಯಭಾರಿಯಾಗಿ ವಿಪುಲ್ ನೇಮಕ- ದಶಕಗಳ ಸುದೀರ್ಘ ಸಂಪ್ರದಾಯಕ್ಕೆ ಬ್ರೇಕ್
ಹೈಕೋರ್ಟ್ ಕಠಿಣ ನಿರ್ದೇಶನ : ನಿಯೋಜಿತ ಸಿಎಂ ಡಿ.ಕೆ.ಶಿ. ಅವರ ಬೃಹತ್ ಕಟೌಟ್ಗಳ ದಿಢೀರ್ ತೆರವು
ಕುವೈತ್ನಲ್ಲಿ ವಿಮಾನಯಾನ ಸೇವೆಗಳು ಸಹಜ ಸ್ಥಿತಿಗೆ- ಟರ್ಮಿನಲ್ -1 ರಿಂದ ಸೇವೆಗಳು ಪುನರಾರಂಭ
ಕಾಟಿಪಳ್ಳ: ಬೋಬಾಸ್ ಫ್ಯಾಮಿಲಿ ರಿಲೀಫ್ ಸಂಸ್ಥಾಪಕ ಅಧ್ಯಕ್ಷ ಶರೀಫ್ ಗಾಣದಬೆಟ್ಟು ನಿಧನ- BFR ಸಂತಾಪ
ಎಲ್ಲಾ ದೇಶಗಳಿಗೆ ಉಮ್ರಾ ವೀಸಾ ವಿತರಣೆ ಪುನಾರಂಭ: 90 ದಿನಗಳ ವಾಸ್ತವ್ಯ
ಅಸ್ಸಾಂ, ಪಶ್ಚಿಮ ಬಂಗಾಳ ಸಿಎಂಗಳಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಇ-ಮೇಲ್ ಸಂದೇಶ- ಅಲ್ಪಸಂಖ್ಯಾತ ಮುಸ್ಲಿಮರ ಆತಂಕ ದೂರಾಗಿಸಲು ಆಗ್ರಹ
ಹಜ್ ಯಾತ್ರಿಕರನ್ನು ಸ್ವಾಗತಿಸಲು ಮದೀನಾ ಸಜ್ಜು: ಸುಗಮ ಪ್ರಯಾಣಕ್ಕಾಗಿ ರಸ್ತೆ ದುರಸ್ತಿ ಕಾರ್ಯಗಳು ಪೂರ್ಣ