janadhvani

Kannada Online News Paper

ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ

ಅವರ ನೇಮಕಾತಿಯ ನಂತರ, ಹಿಂದಿನಿಂದಲೂ ಇದ್ದ ಸೌಹಾರ್ದಯುತ ವಾತಾವರಣವನ್ನು ಪುನಃ ಸ್ಥಾಪಿಸುವಲ್ಲಿ ಹಾಗೂ ಡ್ರಗ್ಸ್ ಮಾಫಿಯಾಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಮಂಗಳೂರು: ಇಲಾಖೆಯೊಳಗಿನ ಸಣ್ಣಪುಟ್ಟ ಗೊಂದಲಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷ್ನರ್ ವರ್ಗಾವಣೆ ವಿಚಾರ ಹೊರಬಾರದಂತೆ ಮಾಡಬೇಕೆಂದು ಡ್ರಗ್ಸ್ ಮುಕ್ತ ಸಮಾಜದ ಆಂದೋಲನದ ಸಾರಥಿ ಇಕ್ಬಾಲ್ ಬಾಳಿಲ ಅವರು ಡಿಜಿಪಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆಯ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮ್ಮ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಿಸಿಆರ್ ಎಸ್ಪಿ ಕಾಶಿನಾಥ್ ಅವರು ಡಿಜಿಪಿಗೆ ಪತ್ರ ಬರೆದಿರುವ ವಿಚಾರ ಕರಾವಳಿ ಭಾಗದಾದ್ಯಂತ ಆತಂಕದ ವಾತಾವರಣವನ್ನು ಉಂಟುಮಾಡಿದೆ.

ಈ ಹಿನ್ನೆಲೆದಲ್ಲಿ, ಎಸ್ಪಿ ಕಾಶಿನಾಥ್ ಅವರಿಗೆ ಯಾವುದೇ ರೀತಿಯ ಮಾನಸಿಕ ಹಿಂಸೆ ಅಥವಾ ಅನ್ಯಾಯವಾಗಿದ್ದರೆ, ಅದಕ್ಕೆ ನ್ಯಾಯಯುತ ಪರಿಹಾರವನ್ನು ಡಿಜಿಪಿ ಕಂಡುಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ವರ್ಗಾವಣೆ ವಿಚಾರ ಮುಂದಕ್ಕೆ ಬರಬಾರದು ಎಂದು ಇಕ್ಬಾಲ್ ಬಾಳಿಲ ಮನವಿಯಲ್ಲಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷ ಹಿಂದೆ ಕರಾವಳಿ ಪ್ರದೇಶದಲ್ಲಿ ಕೋಮು ಕಲಹದ ವಾತಾವರಣ ಮತ್ತು ಮಾದಕ ವಸ್ತುಗಳ ಅಟ್ಟಹಾಸ ಗಂಭೀರ ಮಟ್ಟಕ್ಕೇರಿದ್ದ ಸಂದರ್ಭದಲ್ಲಿ, ಸುಧೀರ್ ಕುಮಾರ್ ರೆಡ್ಡಿ ಅವರನ್ನು ಮಂಗಳೂರು ಕಮಿಷ್ನರ್ ಆಗಿ ನೇಮಕ ಮಾಡಲಾಗಿತ್ತು. ಅವರ ನೇಮಕಾತಿಯ ನಂತರ, ಹಿಂದಿನಿಂದಲೂ ಇದ್ದ ಸೌಹಾರ್ದಯುತ ವಾತಾವರಣವನ್ನು ಪುನಃ ಸ್ಥಾಪಿಸುವಲ್ಲಿ ಹಾಗೂ ಡ್ರಗ್ಸ್ ಮಾಫಿಯಾಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಡ್ರಗ್ಸ್ ವಿರೋಧಿ ಆಂದೋಲನದ ಭಾಗವಾಗಿ ಹಲವಾರು ಬಾರಿ ಕಮಿಷ್ನರ್ ಜೊತೆ ಚರ್ಚೆ ನಡೆಸಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸಮಾಜಮುಖಿ ಚಟುವಟಿಕೆಗಳಿಗೆ ಅವರಿಂದ ಸಾಕಷ್ಟು ಪ್ರೇರಣೆ ಮತ್ತು ಸಹಕಾರ ದೊರೆತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಸುಧೀರ್ ಕುಮಾರ್ ರೆಡ್ಡಿ ಅವರ ಸೇವೆ ಅಗತ್ಯವಾಗಿದ್ದು, ಕೆಲವು ಅಪ್ರತ್ಯಕ್ಷ ಶಕ್ತಿಗಳ ಪ್ರಭಾವದಿಂದ ವರ್ಗಾವಣೆಗೆ ಪ್ರಯತ್ನಗಳು ನಡೆಯುತ್ತಿದ್ದರೆ, ಅದನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ಕುರಿತು ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಕೂಡ ಪತ್ರ ಬರೆಯುವುದಾಗಿ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ. ಕರಾವಳಿ ಭಾಗದ ಶಾಂತಿಯನ್ನು ಬಯಸುವ ಜನತೆಗೆ ಸುಧೀರ್ ಕುಮಾರ್ ರೆಡ್ಡಿ ಅವರಂತಹ ಅಧಿಕಾರಿಯ ಅವಶ್ಯಕತೆ ಇದೆ ಎಂದು ಕೂಡ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿರಿ...