ವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 15 ಅಂಶಗಳ ಶಾಂತಿ ಯೋಜನೆಯನ್ನು ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯೊಂದಿಗೆ ಪ್ರಾರಂಭವಾದ ಈ ಸಂಘರ್ಷವು, ಜಾಗತಿಕ ಮಾರುಕಟ್ಟೆ ಮತ್ತು ಅಂತರಾಷ್ಟ್ರೀಯ ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಯುದ್ಧಕ್ಕೆ ವಿರಾಮ ಹಾಡಲು ಅಮೆರಿಕ ಈ ಹೊಸ ಹೆಜ್ಜೆ ಇಟ್ಟಿದೆ.ಆದರೆ, ಅಮೆರಿಕದೊಂದಿಗೆ ಯಾವುದೇ ಅಧಿಕೃತ ಮಾತುಕತೆಗಳು ನಡೆಯುತ್ತಿವೆ ಎಂಬ ಅಂಶವನ್ನು ಇರಾನ್ ಸ್ಪಷ್ಟವಾಗಿ ನಿರಾಕರಿಸಿದೆ.
ಶಾಂತಿ ಒಪ್ಪಂದದ ಪ್ರಮುಖ ಅಂಶಗಳು:
ಅಮೆರಿಕ ಮಂಡಿಸಿರುವ ಪ್ರಸ್ತಾವನೆಯಲ್ಲಿ ಈ ಕೆಳಗಿನ ಪ್ರಮುಖ ನಿಬಂಧನೆಗಳಿವೆ:
- ತಾತ್ಕಾಲಿಕ ಕದನ ವಿರಾಮ: ತಕ್ಷಣದಿಂದ ಜಾರಿಗೆ ಬರುವಂತೆ 30 ದಿನಗಳ ಕಾಲ ಯುದ್ಧ ನಿಲುಗಡೆ.
- ಪರಮಾಣು ನಿರ್ಬಂಧ: ನತಾನ್ಜ್, ಇಸ್ಫಹಾನ್ ಮತ್ತು ಫೋರ್ಡೋದಲ್ಲಿರುವ ಪರಮಾಣು ಕೇಂದ್ರಗಳನ್ನು ಇರಾನ್ ಧ್ವಂಸಗೊಳಿಸಬೇಕು ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಭರವಸೆ ನೀಡಬೇಕು.
- ಯುರೇನಿಯಂ ಹಸ್ತಾಂತರ: ಇರಾನ್ ಬಳಿ ಇರುವ ಪುಷ್ಟೀಕರಿಸಿದ ಯುರೇನಿಯಂ ಅನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (IAEA) ಹಸ್ತಾಂತರಿಸಬೇಕು.
- ಕ್ಷಿಪಣಿ ನಿಯಂತ್ರಣ: ಕ್ಷಿಪಣಿಗಳ ಸಂಖ್ಯೆ ಮತ್ತು ಅವುಗಳ ವ್ಯಾಪ್ತಿಯ ಮೇಲೆ ನಿರ್ಬಂಧ ಹೇರಬೇಕು.
- ಪ್ರಾದೇಶಿಕ ಗುಂಪುಗಳಿಗೆ ಬೆಂಬಲ: ಇತರೆ ಸಶಸ್ತ್ರ ಗುಂಪುಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು ಮತ್ತು ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕಾಗಿ ಮುಕ್ತಗೊಳಿಸಬೇಕು.
ಒಂದು ವೇಳೆ ಈ ನಿಬಂಧನೆಗಳನ್ನು ಇರಾನ್ ಒಪ್ಪಿಕೊಂಡರೆ, ಅದರ ಮೇಲಿರುವ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಲು ಮತ್ತು ಬುಶೆಹ್ರ್ ಪರಮಾಣು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಗೆ ಬೆಂಬಲ ನೀಡಲು ಅಮೆರಿಕ ಸಿದ್ಧವಿದೆ ಎಂದು ವರದಿಗಳು ತಿಳಿಸಿವೆ.
ಇರಾನ್ ಪ್ರತಿಕ್ರಿಯೆ:
ಅಮೆರಿಕದ ಈ ಪ್ರಸ್ತಾವನೆಗಳನ್ನು ‘ಅತಿಯಾದ ಬೇಡಿಕೆ’ ಎಂದು ಕರೆದಿರುವ ಇರಾನ್, ಇವುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂದು ನಿರ್ಧರಿಸಲು ಟ್ರಂಪ್ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಇರಾನ್ ಕಿಡಿಕಾರಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮಾತನಾಡಿ, “ನಮ್ಮ ದೇಶದ ಹಕ್ಕುಗಳನ್ನು ಮೊದಲು ಅಂಗೀಕರಿಸಬೇಕು, ಯುದ್ಧದ ನಷ್ಟ ಪರಿಹಾರವನ್ನು ನೀಡಬೇಕು ಮತ್ತು ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯುವುದಿಲ್ಲ ಎಂಬ ಬಗ್ಗೆ ಅಂತರಾಷ್ಟ್ರೀಯ ಗ್ಯಾರಂಟಿ ನೀಡಬೇಕು” ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ತೆರವುಗೊಳಿಸಬೇಕು ಎಂಬ ಬೇಡಿಕೆಯನ್ನೂ ಇರಾನ್ ಮುಂದಿಟ್ಟಿದೆ.
ಒಂದೆಡೆ ಶಾಂತಿ ಮಾತುಕತೆಗಳ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಸೈನ್ಯವನ್ನು ರವಾನಿಸಲು ಸಿದ್ಧತೆ ನಡೆಸುತ್ತಿರುವುದು ಈ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ.






