ರಿಯಾದಿನ ಮುಲ್ಹಿಂ ನಲ್ಲಿ ಮರಣ ಹೊಂದಿದ ಇಜಾಝ್ ಅಹ್ಮದ್ ಕಾಸರ್ಕೋಟ್ ಝೈನುಲ್ ಆಬಿದೀನ್ ರವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.
ಮರಣ ಹೊಂದಿದ ಮಾಹಿತಿ ತಿಳಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಸ್ಥಳಕ್ಕೆ ತೆರಳಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ .

ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳನ್ನು ಮಾಡಬೇಕಾಗಿದ್ದು, ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ರಿಯಾದ್ ಕೆಸಿಎಫ್ ಸಾಂತ್ವನ ಇಲಾಖೆ ನಾಯಕರಾದ ಮಜೀದ್ ವಿಟ್ಲ, ಕೆಸಿಎಫ್ ರಾಷ್ಟ್ರೀಯ ಸಾಂತ್ವನ ಇಲಾಖೆ ಅಧ್ಯಕ್ಷ ಭಾಷಾ ಗಂಗಾವಳಿ, ಮೃತರ ಅಣ್ಣ ಖಲೀಫಾ ಮುಹಮ್ಮದ್ ಝಕರಿಯಾ ಮತ್ತು ಮಗ ಮುಹಮ್ಮದ್ ಮಾಝಿನ್ ಖಲೀಫಾ ಹಾಗೂ ಇನ್ನಿತರರು ಮುಂಚೂಣಿಯಲ್ಲಿದ್ದುಕೊಂಡು ಎಲ್ಲಾ ಕಾರ್ಯಗಳನ್ನು ಯಾವುದೇ ಕುಂದುಕೊರತೆಗಳಿಲ್ಲದಂತೆ ಚೆನ್ನಾಗಿ ನಿಭಾಯಿಸಿದ್ದಾರೆ. ಊರಿನಲ್ಲಿ ಮೃತರ ಕುಟುಂಬಸ್ಥರು ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ.
ರಿಯಾದಿನ ಅಲ್ ರಾಜಿ ಮಸ್ಜಿದ್ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ಅಲ್-ನಸೀಮ್ ಸಾರ್ವಜನಿಕ ದಫನ ಭೂಮಿಗೆ ಮೃತದೇಹವನ್ನು ಕೊಂಡೊಯ್ಯಲಾಯಿತು.
ನಸೀಂನಲ್ಲಿ ನಡೆದ ದಫನ್ ಕಾರ್ಯದ ನೇತೃತ್ವವವನ್ನು ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷ ಮಜೀದ್ ವಿಟ್ಲ ಮತ್ತು ಶಿಕ್ಷಣ ಇಲಾಖೆ ಅಧ್ಯಕ್ಷ ದಾವೂದ್ ಸಅದಿ ವಹಿಸಿದ್ದರು. ಹಾರಾ ಯುನಿಟ್ ಅಧ್ಯಕ್ಷ ರಝಾಕ್ ಮುಸ್ಲಿಯಾರ್, ಅಶ್ರಫ್ ಕೆಎಂಎಸ್ ಸೇರಿದಂತೆ ಕೆಸಿಎಫ್ ರಾಷ್ಟ್ರೀಯ, ಝೋನ್ ನಾಯಕರು, ಕಾರ್ಯಕರ್ತರು, ಕುಟುಂಬಸ್ಥರು, ಗೆಳೆಯರು, ಸ್ಥಳೀಯರು ಪಾಲ್ಗೊಂಡಿದ್ದರು. ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


