janadhvani

Kannada Online News Paper

ಸೌದಿ: ಭೀಕರ ರಸ್ತೆ ಅಪಘಾತ- ಒಂದೇ ಕುಟುಂಬದ ನಾಲ್ವರು ಸೇರಿ 6 ಮಂದಿ ಉಮ್ರಾ ಯಾತ್ರಿಕರು ನಿಧನ

ಬೆಂಗಳೂರು,ಫೆ.22: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ ಒಂದೇ ಕುಟುಂಬದ ನಾಲ್ವರು ಸೇರಿ 6 ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ವರದಿಯಾಗಿದೆ.

ರಾಯಚೂರು ಮೂಲದ ಒಂದೇ ಕುಟುಂಬದ ಶಫೀದ್ ಹುಸೈನ್ ಸುಲ್ಲದ್, ಬಡೇಜಾನ್ ಸುಲ್ಲದ್, ಸಿರಾಜ್ ಬೇಗಮ್ ಸುಲ್ಲದ್, ಸಮೀರ್ ಸುಲ್ಲದ್ ಹಾಗೂ ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಮೈನುದ್ದೀನ್ ಸಾಹೇಬ್, ಸೇಡಂನ ಬೇಗಮ್ ಮುಹಮ್ಮದ್ ಅಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಇವರು ಸಾಲಿಹೀನ್ ಎಂಬ ಹಜ್ ಮತ್ತು ಉಮ್ರಾ ಟೂರ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಮೂಲಕ ಪವಿತ್ರ ಮಕ್ಕಾ ಮತ್ತು ಮದೀನಾ ಪ್ರವಾಸ ಕೈಗೊಂಡಿದ್ದರು. ಉಮ್ರಾ ನಿರ್ವಹಿಸಿ ನಿನ್ನೆ ರಾತ್ರಿ ಬಸ್ ಮೂಲಕ ಮದೀನಾಕ್ಕೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಬಸ್ ಮಕ್ಕಾದಿಂದ 250 ಕಿ.ಮೀ.ದೂರದಲ್ಲಿ ಮುಂದೆ ಚಲಿಸುತ್ತಿದ್ದ ಟ್ರಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.