ಮಂಗಳೂರು: ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಜನವರಿ 22 ರಂದು , ಮಂಗಳೂರು ಮಂಗಳಾ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ದ. ಕ ಜಿಲ್ಲಾ ಮಟ್ಟದ ಪ್ರಜಾ ಧ್ವನಿ ಸಮಾವೇಶ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಡಿಕೆಶಿ ರವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳಲಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಕರ್ನಾಟಕದ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿದ್ದ, ಕೆ.ಅಶ್ರಫ್ ಮಾಜಿ ಮೇಯರ್ ರವರನ್ನು ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವು ನಿಖರ ಕಾರಣ ರಹಿತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ದಿಂದ ವಿರಹಿತ ಗೊಳಿಸಿತ್ತು.
ಜಿಲ್ಲೆಯಲ್ಲಿ ಒಂದು ನಿರ್ಧಿಷ್ಟ ರಾಜಕೀಯ ಪಕ್ಷದ ಸದಸ್ಯರಾಗಿದ್ದ ಅಹ್ಮದ್ ಖುರೇಷಿ ಎಂಬವರಿಗೆ ಮಂಗಳೂರು ನಗರ ಪೊಲೀಸರು ದೌರ್ಜನ್ಯವೆಸಗಿದ ಆರೋಪದ ಪ್ರಕರಣ ಒಂದರಲ್ಲಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಸರಕಾರದ ನಿಲುವುಗಳ ವಿರುದ್ಧ ಮಂಗಳೂರು ಚಲೋ ಬೃಹತ್ ರ್ಯಾಲಿ ಆಯೋಜನೆಯ ನೇತೃತ್ವ, ಆ ನಂತರದಲ್ಲಿ ರಾಜ್ಯದ ಪ್ರಮುಖ ಸುದ್ದಿ ಸಂಸ್ಥೆ ಸುವರ್ಣ ನ್ಯೂಸ್ ನ ನಿರೂಪಕ ಅಜಿತ್ ಹನುಮಕ್ಕನವರ್ ರವರ ಪ್ರವಾದಿ ಮೊಹಮ್ಮದ್ ರವರ ವಿರುದ್ದದ ನಿಂದನಾತ್ಮಕ ಹೇಳಿಕೆ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ,ಇತ್ಯಾದಿ ವಿಷಯಗಳಲ್ಲಿ ಕೆ.ಅಶ್ರಫ್ ನೇತೃತ್ವ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರು ಹಾಕಿ ಕೊಳ್ಳುವಿಕೆ, ಇತ್ಯಾದಿ ಕಾರಣಗಳಿಗಾಗಿ ಕೆ.ಅಶ್ರಫ್ ರವರನ್ನು ಪಕ್ಷದಿಂದ ವಿರಹಿತ ಗೊಳಿಸಲಾಗಿತ್ತು.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕೆ.ಅಶ್ರಫ್ ರವರು,ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ವಿಧಾನ ಸಭಾ ಕ್ಷೇತ್ರವಾದ ಮಂಗಳೂರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುತ್ಸದ್ದಿ ರಾಜಕಾರಣಿ ಎಂದೇ ಕರೆಯಲ್ಪಡುವ,ಹಾಲಿ ಶಾಸಕರು ಮತ್ತು ಮಾಜಿ ಸಚಿವರೂ ಆದ ಶ್ರೀ ಯು.ಟಿ.ಖಾದರ್ ವಿರುದ್ಧ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆನಂತರ ಮಂಗಳೂರು ಮಹಾನಗರ ಪಾಲಿಕೆ ಮಂಗಳೂರು ಪೋರ್ಟ್ ವಾರ್ಡ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಲತೀಫ್ ವಿರುದ್ಧ ಪರಾಜಯ ಹೊಂದಿದ್ದರು.
ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಗೆ 1997ರಲ್ಲಿ ನಡೆದ ಚುನಾವಣೆಯಲ್ಲಿ ಬಂದರ್ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಮನಾಪ ವಾರ್ಡ್ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು, 2002 ರಲ್ಲಿ ಅದೇ ವಾರ್ಡ್ ನಿಂದ ಮರು ಆಯ್ಕೆ ಗೊಂಡಿದ್ದರು, ಈ ಅವಧಿಯಲ್ಲಿ ಮನಪಾ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೇ ಸಂದರ್ಭ ಹಿಂದುಳಿದ ವರ್ಗ ಎ ಅಭ್ಯರ್ಥಿ ಗೆ ಮನಾಪ ಮೇಯರ್ ಹುದ್ದೆ ಮೀಸಲು ಬಂದ ಸಂದರ್ಭ ಕೆ . ಅಶ್ರಫ್ 2005/06 ನೆ ಸಾಲಿನಲ್ಲಿ ಮನಾಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಮನಾಪ ನಂತರದ ಅವಧಿಯಲ್ಲಿ ಬಂದರ್ ವಾರ್ಡ್ ಮಹಿಳಾ ಮೀಸಲು ಸ್ಥಾನ ಆದ ಕಾರಣದಿಂದ ಮಂಗಳೂರು ಪೋರ್ಟ್ ವಾರ್ಡ್ ನಿಂದ ಸ್ಪರ್ಧಿಸಿ ವಿಜಯಿ ಆಗಿದ್ದರು. 2012 ರಲ್ಲಿ ಕೆ.ಅಶ್ರಫ್ ಮಂಗಳೂರು ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು.
ಇತ್ತೀಚಿಗಿನ ವರ್ಷಗಳಲ್ಲಿ ಕೆ.ಅಶ್ರಫ್ ರವರು ಅದೆಷ್ಟೋ ಮುಸ್ಲಿಮ್ ಸಾಮುದಾಯಿಕ ಸಮಸ್ಯೆ ಮತ್ತು ವಿಷಯಗಳಲ್ಲಿ ನೇತೃತ್ವ ವಹಿಸಿ ವಿವಿಧ ಕ್ಲಿಷ್ಟಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದ್ದರು ಮತ್ತು ಸಾರ್ವಜನಿಕ ಸಂಪರ್ಕ ಹೊಂದಿದ್ದರು. ಅವರು ಕಂಡತ್ ಪಳ್ಳಿ ಮಸೀದಿಯ ,ಮಂಗಳೂರು ಸೆಂಟ್ರಲ್ ಕಮಿಟಿ, ಕೇಂದ್ರ ಜುಮ್ಮಾ ಮಸೀದಿ ಉಪಾಧ್ಯಕ್ಷರಾಗಿದ್ದು,ಮಂಗಳೂರು ಸಾಮರಸ್ಯ ಸಂಸ್ಥೆಯ ಸಂಚಾಲಕರು ಆಗಿದ್ದಾರೆ.
ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಸಹ ಸಂಚಾಲಕರು ಆಗಿದ್ದಾರೆ.ಮತ್ತು ವಿವಿಧ ಮೂಲಭೂತ ಸಮಸ್ಯೆಗಳ ಹೋರಾಟದಲ್ಲಿ ಭಾಗವಹಿಸಿ ಜನ ಮನ್ನಣೆ ಪಡೆದಿದ್ದಾರೆ. ವಿವಿಧ ರಾಜಕೀಯ ಪಕ್ಷದಿಂದ ಕೆ.ಅಶ್ರಫ್ ರವರಿಗೆ ಪ್ರಾತಿನಿಧ್ಯ ಆಹ್ವಾನವಿದ್ದರೂ, ತಮ್ಮ ಸಾಮುದಾಯಿಕ ಚಟುವಟಿಕೆ ಮತ್ತು ರಾಜಕೀಯ ಕ್ಷೇತ್ರದ ಮದ್ಯೆ ಅಂತರ ಕಾಯ್ದು ಕೊಂಡಿದ್ದರು. ಪ್ರಸ್ತುತ ಕೆ.ಅಶ್ರಫ್ ಪ್ರಮುಖ ಪ್ರಭಾವಿ ಕಾಂಗ್ರೆಸ್ ನಾಯಕರೊಂದಿಗೆ ಅವರ ನಿಕಟ ಸಂಪರ್ಕ ಮತ್ತು ಕಾಂಗ್ರೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಕೆ.ಅಶ್ರಫ್ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆಗೆ ಪುಷ್ಟಿ ನೀಡಿತ್ತು. ಪ್ರಸ್ತುತ ಜನವರಿ 22 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಳ್ಳಲಿದ್ದಾರೆ.