ಮಂಜೇಶ್ವರ,ಅ.2: ಸಕ್ರೀಯ ಸುನ್ನೀ ಕಾರ್ಯಕರ್ತ, ಉಲಮಾ ಸ್ನೇಹಿ ಅಂದುಚ್ಚ( ಅಂದು ಪೊಯ್ಯತಬೈಲ್) ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಇಂದು ಸಂಜೆ ನಮ್ಮನ್ನಗಲಿದರು.
ಸರಿಸುಮಾರು 23 ವರ್ಷಗಳಿಂದ ಒಂದಿಂಚೂ ನಡೆದಾಡಲಾಗದೇ ಹಾಸಿಗೆಯಲ್ಲಿದ್ದ (Andu Poyyathabail) ಎಂಬ ಅಚ್ಚರಿಯ ವ್ಯಕ್ತಿ ನಮ್ಮನ್ನಗಲಿದ್ದಾರೆ. ವರ್ಕಾಡಿಯ ಪೊಯ್ಯತ್ತಬೈಲು ಮಣವಾಠಿ ಬೀವೀ ದರ್ಗಾ ಪರಿಸರದ ತನ್ನ ಮನೆಯಲ್ಲಿ ನಿಶ್ಯಕ್ತನಾಗಿ, ಸಾಹಸಗಾಥೆಯ ಬದುಕು ಸಾಗಿಸುತ್ತಿದ್ದ “ಅಂದು” ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಮುಖಮುದ್ರೆಯನ್ನು ಹೊಂದಿದ್ದ ಪವಾಡ ವ್ಯಕ್ತಿಯಾಗಿದ್ದರು.
ಒಂದು ಮೊಬೈಲ್ ಅಂದುವನ್ನು ಇಡೀ ಜಗತ್ತಿಗೇ ಪರಿಚಯಿಸಿದೆ. 40 ವರ್ಷ ಪ್ರಾಯದ ಅಂದು ತನ್ನ 17ನೇ ವರ್ಷದಲ್ಲಿಯೇ ಹಾಸಿಗೆ ಪಾಲಾದ ಯುವಕ. ಪವಿತ್ರ ರಂಝಾನಿನ ಸಂಜೆ ಎಳನೀರು ಕೊಯ್ಯಲೆಂದು ನೆರೆಮನೆಯ ತೆಂಗಿಗೆ ಹತ್ತಿದ್ದ ಆ ಯುವಕ ಆಯತಪ್ಪಿ ಕೆಳಗೆ ಬಿದ್ದು ಬೆನ್ನು ಮೂಲೆ ಮುರಿದು ಮತ್ತೆ ಎದ್ದು ನಿಲ್ಲಲೇ ಇಲ್ಲ. ಅಲ್ಲಿಂದೀಚೆಗೆ ಈ ಅಂದುವಿನ ಜೀವನ ಹಾಸಿಗೆಯಲ್ಲಾಗಿತ್ತು.
ಎರಡು ದಶಕಗಳಿಂದ ದೇಹ ದಣಿದಿದ್ದರೂ,ಅವರ ಆದರ್ಶ, ಚಳವಳಿಯ ಬದ್ಧತೆಗೆ ದಣಿವಿರಲಿಲ್ಲ. ಸ್ಥಳೀಯ ಸುನ್ನಿ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಆಂಬ್ಯುಲೆನ್ಸ್ಗಳಲ್ಲಿ ಕಂಡುಬರುವ ಅವರು, ಹಲವಾರು ಸುನ್ನೀ ನಾಯಕರು, ವಿದ್ವಾಂಸರು ಮತ್ತು ಸಾದಾತ್ಗಳನ್ನು ನೇರವಾಗಿ ಸಂಪರ್ಕ ಕಲ್ಪಿಸಲು ಅವಕಾಶವನ್ನು ಸೃಷ್ಟಿಸಿದ್ದರು.
ಧಾರ್ಮಿಕ ಸಂಘಟನೆಯೊಂದರ ಪ್ರಚಾರಕನಾಗಿ ತನ್ನ ಹಾಸಿಗೆಯಿಂದಲೇ ಜಗತ್ತನ್ನು ಗೆದ್ದ ಅದ್ಭುತ ಮನುಷ್ಯ. ಜನಪ್ರತಿನಿಧಿಗಳು, ಧಾರ್ಮಿಕ ಪಂಡಿತರು ಅವರನ್ನು ಭೇಟಿ ಮಾಡಲು ದೌಡಾಯಿಸುತ್ತಿದ್ದರು. ಊರಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಅವಿರತ ಶ್ರಮವಹಿಸುತ್ತಿದ್ದ ಅಂದು ಅಪಾರ ಸ್ನೇಹಿತರನ್ನು ಸಂಪಾದಿಸಿದ್ದರು.
ಅಂದು ಇತ್ತೀಚೆಗೆ ಬೇರೆ ಬೇರೆ ರೀತಿಯ ರೋಗಕ್ಕೀಡಾಗಿ ಅಪಾರ ಯಾತನೆಯನ್ನು ಅನುಭವಿಸುತ್ತಿದ್ದರೂ ನಮ್ಮ ಮುಂದೆ ಮಂದಸ್ಮಿತ ನಗು ಬೀರುತ್ತಿದ್ದ ಒಂದು ಅಚ್ಚರಿಯ ಜೀವ. ಕೈಯ್ಯಲ್ಲಿ ಒಂದು ಮೊಬೈಲ್, ಸಂಚರಿಸಲು ಒಂದು ಆಂಬ್ಯುಲೆನ್ಸ್, ಜೀವಿಸಲೊಂದು ಮನೆ, ಇವೆಲ್ಲವೂ ಕರುಣಾಮಾಯೀ ಅಂದುವಿಗೆ ಅಭಿಮಾನಿಗಳು ಕೊಟ್ಟ ಉಡುಗೊರೆ.
ಬದುಕಿಗೆ ಸವಾಲೊಡ್ಡಿ, ನಮ್ಮನಡುವೆ ಪವಾಡವೆಂಬಂತೆ ಬದುಕಿದ್ದ ಅಂದು ಎಂಬ ಅಬ್ದುಲ್ ರಹ್ಮಾನ್ ಇನ್ನು ನೆನಪು ಮಾತ್ರ. ಅಗಲಿದ ಆ ದಿವ್ಯ ಚೇತನಕ್ಕೆ ಸರ್ವಶಕ್ತನು ಮಗ್ಫಿರತ್ ಹಾಗೂ ಮರ್ಹಮತನ್ನು ನೀಡಿ ಅನುಗ್ರಹಿಸಲಿ..ಅಮೀನ್.
ಅಂದು ಪೊಯ್ಯತಬೈಲ್ ಅವರ ಅಗಲಿಕೆಗೆ ಸುನ್ನೀ ಸಂಘ ಸಂಸ್ಥೆಗಳು ತೀವ್ರ ಸಂತಾಪವನ್ನು ಸೂಚಿಸಿದೆ. ಮೃತರಿಗಾಗಿ ದುಆ ಮಾಡಿ ಜನಾಝ ನಮಾಝ್ ನಿರ್ವಹಿಸುವಂತೆ ಕುಟುಂಭಸ್ಥರು ಹಾಗೂ ಸುನ್ನೀ ಸಂಘಟನಾ ನಾಯಕರು ವಿನಂತಿಸಿ ಕೊಂಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ