janadhvani

Kannada Online News Paper

ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್

ಇಸ್ಲಾಮಿಕ್ ಇತಿಹಾಸ ಮತ್ತು ಘಟನೆಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ಸನ್ನಿವೇಶವನ್ನು ಅರ್ಥಮಾಡಿಕೊಳ್ಳದೆ ಬಹಿರಂಗ ಹೇಳಿಕೆ ನೀಡುವುದು ಮುಖ್ಯಮಂತ್ರಿಯವರ ಹುದ್ದೆಗೆ ಶೋಭ ತರುವುದಿಲ್ಲ ಎಂದು ಕೇರಳ ಮುಸ್ಲಿಂ ಜಮಾಅತ್ ಹೇಳಿದೆ

ಮಲಪ್ಪುರಂ | ಕಾಂತಪುರಂ ಉಸ್ತಾದರು ಇಸ್ಲಾಂ ಅನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂದು ಅಪ್ಪಟ ಸುಳ್ಳು ಹೇಳಿದ ಮುಖ್ಯಮಂತ್ರಿ ವಿ. ಡಿ. ಸತೀಶನ್ ತಮ್ಮ ಹೇಳಿಕೆಯನ್ನು ಹಿಂಪಡೆದು ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಬೇಕೆಂದು ಕೇರಳ ಮುಸ್ಲಿಂ ಜಮಾಅತ್ ಮಲಪ್ಪುರಂ ಜಿಲ್ಲಾ ಸಮಿತಿ ಆಗ್ರಹಿಸಿದೆ. ಇಸ್ಲಾಮಿಕ್ ಇತಿಹಾಸ ಮತ್ತು ಘಟನೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು, ಅದರ ಸಂದರ್ಭವನ್ನು ಸಹ ಅರ್ಥಮಾಡಿಕೊಳ್ಳದೆ ಬಹಿರಂಗ ಹೇಳಿಕೆ ನೀಡುವುದು ಮುಖ್ಯಮಂತ್ರಿಯ ಹುದ್ದೆಗೆ ಶೋಭೆಯಲ್ಲ ಎಂದೂ ಸಮಿತಿ ಹೇಳಿದೆ.

ಪವಿತ್ರ ಕುರಾನ್, ಪ್ರವಾದಿ ಮತ್ತು ಇಸ್ಲಾಮಿಕ್ ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಓದಿ ಅರ್ಥಮಾಡಿಕೊಳ್ಳಲು ವಾಚನಪ್ರಿಯರೆಂದು ಪ್ರತಿಪಾದಿಸುವ ಮುಖ್ಯಮಂತ್ರಿ ಇನ್ನಾದರೂ ತಯಾರಾಗಬೇಕೆಂದು ಸಮಿತಿ ವಿನಂತಿಸಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಉಸ್ತಾದ್ ಅವರಂತಹ ಗೌರವಾನ್ವಿತ ಧಾರ್ಮಿಕ ಮತ್ತು ಸಾಮಾಜಿಕ ನಾಯಕರ ವಿರುದ್ಧ ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದು ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವಲ್ಲ. ಮುಖ್ಯಮಂತ್ರಿ ಸತೀಶನ್ ಅವರು ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು.

ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಮುಸ್ಲಿಂ ಮಹಿಳೆಯರಿಗೆ ನೀಡಿದ ಸಲಹೆಯ ವಿರುದ್ಧ ಮುಖ್ಯಮಂತ್ರಿಯವರು ಇಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. “ಮಹಿಳೆಯರು ಮನೆಗಳಲ್ಲೇ ಅಡಗಿ ಕುಳಿತುಕೊಳ್ಳಬೇಕಾದವರಲ್ಲ. ಕಾಂತಪುರಂ ಅವರ ಹೇಳಿಕೆಯನ್ನು ಯಾವುದೇ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. 19ನೇ ಶತಮಾನದ ವಿಚಾರವನ್ನು 21ನೇ ಶತಮಾನದಲ್ಲಿ ಹೇಳಲಾಗುತ್ತಿದೆ. ಈ ಹೇಳಿಕೆಯನ್ನು ಕೇರಳ ಸರ್ಕಾರವಾಗಲಿ ಅಥವಾ ನಮ್ಮ ಪಕ್ಷವಾಗಲಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದರು. ಅಲ್ಲದೆ, ಕಾಂತಪುರಂ ಅವರು ಇಸ್ಲಾಂ ಅನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಟೀಕಿಸಿದ್ದರು. ಪ್ರವಾದಿಯವರ ಮೊದಲ ಪತ್ನಿ ಉದ್ಯಮಿಯಾಗಿದ್ದರು ಮತ್ತು ಇನ್ನೊಬ್ಬ ಪತ್ನಿ ಆಯಿಷಾ ಯುದ್ಧದಲ್ಲಿ ಸರ್ವಸೈನ್ಯಾಧಿಪತಿಯಾಗಿ ಭಾಗವಹಿಸಿದ್ದರು ಎಂದು ಉಲ್ಲೇಖಿಸಿ, ಇಸ್ಲಾಮಿಕ್ ಇತಿಹಾಸದಲ್ಲಿನ ಮಹಿಳೆಯರ ಮುನ್ನಡೆಯನ್ನು ವಿವರಿಸುತ್ತಾ ಮುಖ್ಯಮಂತ್ರಿ ತಾನೋರ್ವ ಮಹಾ ಪಂಡಿತನಂತೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿರಿ...