janadhvani

Kannada Online News Paper

ಮದರಸ ವಿರೋಧಿ ಹೇಳಿಕೆ: ಹರಿಕೃಷ್ಣ ಬಂಟ್ವಾಳ್ ಭೇಟಿ ನೀಡಿದ ಮದರಸಗಳೆಷ್ಟು?- ಕೆ.ಅಶ್ರಫ್

ಮದರಸಗಳ ಚಟುವಟಿಕೆಗಳನ್ನು ಭಯೋತ್ಪಾದನೆಯ ಮೂಲ ಎಂದು ಈ ರೀತಿ ತ್ವರಿತ ಹೇಳಿಕೆ ನೀಡಿರುವುದು ಅವರ ಆರ್.ಎಸ್.ಎಸ್ ಗುಲಾಮಿತ್ವವನ್ನು ಸೂಚಿಸುತ್ತಿದೆ

ಮಂಗಳೂರು: ಬಿ.ಜೆ.ಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತನ್ನ ನಿಕೇತನ ಪ್ರೇರಿತ ಹೇಳಿಕೆಯಲ್ಲಿ ಮದರಸ ಭಯೋತ್ಪಾದನೆಯ ಮೂಲ ಎಂದು ಹೇಳಿಕೆ ನೀಡಿದ್ದಾರೆ. ಹರಿಕೃಷ್ಣ ಬಂಟ್ವಾಳ್ ರವರು ತನ್ನ ಈ ಹಿಂದಿನ ರಾಜಕೀಯ ಜೀವನದಲ್ಲಿ ಅವರ ರಾಜಕೀಯ ಚಟುವಟಿಕೆಗಳಲ್ಲಿ ತಾನು ಭೇಟಿ ನೀಡಿದ ಮದರಸ ಸಂಸ್ಥೆಗಳ ಸಂಖ್ಯೆಯನ್ನು ಹೇಳಲಿ ಎಂದು ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ರವರು ಸವಾಲು ಹಾಕಿದ್ದಾರೆ.

ದ.ಕ.ಜಿಲ್ಲೆಯ ಬಂಟ್ವಾಳ ಕ್ಷೇತ್ರದ ಪ್ರಮುಖ ರಾಜಕೀಯ ನಾಯಕರು, ಪ್ರತಿನಿಧಿ ಮತ್ತು ಮಾಜಿ ಸಚಿವರ ಆಪ್ತರಾಗಿದ್ದ ಹರಿಕೃಷ್ಣ ಬಂಟ್ವಾಳ್ ರವರು ಅಂದು ತನ್ನ ರಾಜಕೀಯ ಚಟುವಟಿಕೆಗಳ ಭಾಗವಾದ ಕ್ಷೇತ್ರವಾರು ಭೇಟಿಗಳ ಕಾರ್ಯಕ್ರಮ ಇತ್ಯಾದಿಗಳಲ್ಲಿ ಮದರಸ, ಮಸೀದಿ, ಧಾರ್ಮಿಕ ಸಂಘಟನೆ, ಅನಾಥಾಶ್ರಮ, ಅಲ್ಪಸಂಖ್ಯಾತ ಶಾಲೆ ಕಾಲೇಜುಗಳನ್ನು ಭೇಟಿ ಮಾಡಿ ಅಲ್ಲಿನ ಧ್ಯೇಯೋದ್ದೇಶ ಗಳನ್ನು ಶ್ಲಾಘಿಸಿದ ಸಂದರ್ಭಗಳ ನ್ನು ಮರೆತಿರುವಂತಿದೆ ಎಂದು ಅಶ್ರಫ್ ಹೇಳಿದರು.

ಹರಿಕೃಷ್ಣ ಬಂಟ್ವಾಳ್ ರವರು ತನ್ನ ಹಿಂದಿನ ರಾಜಕೀಯ ಚಟುವಟಿಕೆಗಳ ಭಾಗವಾಗಿ ಭೇಟಿ ನೀಡಿದ ಅಷ್ಟೂ ಮದರಸಗಳ ಚಟುವಟಿಕೆಗಳನ್ನು ಭಯೋತ್ಪಾದನೆಯ ಮೂಲ ಎಂದು ಈ ರೀತಿ ತ್ವರಿತ ಹೇಳಿಕೆ ನೀಡಿರುವುದು ಅವರ ಆರ್.ಎಸ್.ಎಸ್ ಗುಲಾಮಿತ್ವವನ್ನು ಸೂಚಿಸುತ್ತಿದೆ. ಹರಿಕೃಷ್ಣ ಬಂಟ್ವಾಳ್ ರಿಗೆ ಮುದಿತ್ವ ಪ್ರಾಪ್ತವಾಗಿದ್ದರೂ ಅವರ ಸಮಕಾಲೀನ ಇತರ ನಾಯಕರು ಇಂದೂ ಕೂಡ ಪ್ರಭುದ್ದತೆ ಪಾಲಿಸುತ್ತಿದ್ದಾರೆ. ಇನ್ನಾದರೂ ಹೇಳಿಕೆ ನೀಡುವಾಗ ನಿಖೇತನ ಪ್ರೇರಿತ ಲಿಖಿತ ಚೀಟಿ ಹೊರತಾದ ಹೇಳಿಕೆ ನೀಡಲಿ ಎಂದು ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.