ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ರಾಜ್ಯ ಸರಕಾರಕ್ಕೆ ಶುಕ್ರವಾರ ಅನುಮತಿ ನೀಡಿದೆ.ಆಗಸ್ಟ್ 31ರಿಂದ ನಿರ್ದಿಷ್ಟ ಅವಧಿಗೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.ಅನುಮತಿ ಕೋರಿದ ಅರ್ಜಿಗಳನ್ನು ಪರಿಶೀಲಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ.
ನಿನ್ನೆ , ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರ, ವಕ್ಫ್ ಮಂಡಳಿ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ, ಮೈದಾನವನ್ನು ಆಟದ ಬಳಕೆಗಷ್ಟೇ ಸೀಮಿತಗೊಳಿಸಬೇಕು ಹಾಗೂ ರಮ್ಜಾನ್ ಮತ್ತು ಬಕ್ರೀದ್ ಹಬ್ಬಕ್ಕೆ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು. ಈ ಎರಡು ದಿನ ಹೊರತುಪಡಿಸಿ ಮತ್ಯಾವುದೇ ದಿನ ಪ್ರಾರ್ಥನೆಗೆ ಅವಕಾಶವಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು.
ಮೈದಾನದ ಮಾಲೀಕತ್ವ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಂದೆಯೇ ಗೆಜೆಟ್ ನೋಟೀಫಿಕೇಶನ್ ಆಗಿದೆ. ಸುಪ್ರೀಂ ಕೋರ್ಟ್ ಆದೇಶ ಕೂಡಾ ಇದೆ. ಮಕ್ಕಳು ಆಟ ಆಡಲು ಅನುಮತಿ ಇದೆ. ವರ್ಷಕ್ಕೆ ಎರಡು ಬಾರಿ ನಮಾಜ್ ಗೆ ಅನುಮತಿ ಇದೆ ಎಂದು ವಕ್ಫ್ ಬೋರ್ಡ್ ಪರ ವಕೀಲರು ನಿನ್ನೆ ಮಾಹಿತಿ ನೀಡಿದ್ದರು.
ತೀರ್ಪು ಸ್ವಾಗತಾರ್ಹ- ಸಿಟಿ ರವಿ
ಹಿಂದೂಗಳ ಧಾರ್ಮಿಕ ಆಚರಣೆ ಸ್ವಾತಂತ್ರ್ಯ ಯಾರೊಬ್ಬರ ಬಳಿ ಕೇಳಿ ಪಡೆಯುವ ಭಿಕ್ಷೆ ಅಲ್ಲ ಅದು ಜನ್ಮ ಸಿದ್ದ ಹಕ್ಕು ಅನ್ನೋದನ್ನು ಇಂದಿನ ತೀರ್ಪು ಎತ್ತಿ ಹಿಡಿದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಕಂದಾಯ ಇಲಾಖೆಗೆ ಸೇರಿದ್ದ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಸಮಿತಿಗಳಿಗೆ ಅನುಮತಿ ನೀಡಲು ನಾನು ಈಗಾಗಲೇ ಘನ ಸರಕಾರಕ್ಕೆ ಪತ್ರ ಬರೆದಿದ್ದು ಅದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕೂಡಾ ಆಗಿತ್ತು. ಇಂದಿನ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಆ ನಿಟ್ಟಿನಲ್ಲೇ ಇದೆ .ಆಟದ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನಿನ್ನೆ ಹೈಕೋರ್ಟ್ ನ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನಿಂದ ನಿರಾಶರಾಗಿದ್ದ ನಮಗೆ ಇಂದಿನ ತೀರ್ಪು ಮತ್ತೊಮ್ಮೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಿದೆ ಮತ್ತು ಸಂತಸ ತಂದಿದೆ ಎಂದರು.







