ಧಾರವಾಡ: ರಾಜ್ಯದಲ್ಲಿ ಹಿಂದುತ್ವ ಉಗ್ರವಾದಿಗಳ ರಣ ಕೇಕೆ ಎಲ್ಲೆ ಮೀರುತ್ತಿದ್ದು, ಮತೀಯ ಸಂಘರ್ಷವನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದೆ ರಾಜ್ಯ ಸರ್ಕಾರವು ನರಳುತ್ತಿದೆ. ಘನವೆತ್ತ ಮಂತ್ರಿ ಮಹಾಶಯರು ಕೂಡ ಕೋಮು ಪ್ರಚೋದನೆಕಾರಿ ಹೇಳಿಕೆಯನ್ನು ನೀಡುವಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಇದೆಲ್ಲವೂ ಹಿಂದುತ್ವದ ಹೆಸರಿನಲ್ಲಿ ಕೋಮು ಸಂಘರ್ಷ ನಡೆಸುವವರಿಗೆ ಪುಷ್ಟಿ ನೀಡುವಂತಾಗಿದೆ.
ರಾಜ್ಯದ ಹಲವು ಕಡೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ನೆಪದಲ್ಲಿ ಬಡಪಾಯಿ ವ್ಯಾಪಾರಿಗಳ ಹೊಟ್ಟೆಗೆ ಕಲ್ಲು ಹಾಕಲಾಗುತ್ತಿದೆ. ಇನ್ನೂ ಮುಂದುವರೆದ ಭಾಗವಾಗಿ ನಿನ್ನೆ ಧಾರವಾಡದಲ್ಲೂ ಈ ರೀತಿಯ ಅಮಾನುಷ ಘಟನೆ ನಡೆದಿದೆ. ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಬಳಿ ಇದ್ದಂತಹ 4 ಮುಸ್ಲಿಂ ಅಂಗಡಿಗಳನ್ನ ಶ್ರೀರಾಮ ಸೇನೆ ಹೆಸರಿನಲ್ಲಿ ಬಂದ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.
ನಬಿಸಾಬ್ ಎಂಬ ಹೆಸರಿನ ವೃದ್ಧ ಮುಸ್ಲಿಮ್ ವ್ಯಾಪಾರಿಯ ಅಂಗಡಿಯಲ್ಲಿರುವ ಎಲ್ಲಾ ಕಲ್ಲಂಗಡಿ ಹಣ್ಣುಗಳನ್ನು ಬೀದಿಗೆಸದು ಮೃಗೀಯತೆಯನ್ನು ನಾಚಿಸುವಂತೆ ತಿನಿಸುಗಳನ್ನು ನಾಶ ಮಾಡಿದ್ದರು ಶ್ರೀರಾಮ ಸೇನೆ ಕಾರ್ಯಕರ್ತರು. ಈ ದಾಂಧಲೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದರು. ಇಂತಹ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಅಂತ ಆಗ್ರಹಿಸಿದ್ದರು. ಈ ಬೆನ್ನಲ್ಲೀಗ ನೊಂದ ವ್ಯಾಪಾರಿ ನಬಿಸಾಬ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಆಪ್ತರ ಮೂಲಕ ಹತ್ತು ಸಾವಿರ ರೂಪಾಯಿ ನೀಡಿ ಆರ್ಥಿಕವಾಗಿ ನೆರವು ನೀಡಿದ್ದಾರೆ.