janadhvani

Kannada Online News Paper

ಸಾರ್ವಜನಿಕರಿಂದ ಸೂಕ್ತ ಸಹಕಾರ ದೊರೆಯದಿದ್ದಲ್ಲಿ ಲಾಕ್‍ಡೌನ್ ಅನಿವಾರ್ಯ- ಗೃಹ ಸಚಿವ

ಸದ್ಯಕ್ಕೆ ಲಾಕ್‍ಡೌನ್ ಮಾಡುವ ಉದ್ದೇಶ ಇಲ್ಲ. ಅನಿವಾರ್ಯವಾದರೆ ಮಾಡಬೇಕಾಗಬಹುದು. ಜನರ ಜೀವ ಉಳಿಸಲು ಆರ್ಥಿಕಾಭಿವೃದ್ಧಿ ಮತ್ತು ಶಾಲಾ -ಕಾಲೇಜು ಬಂದ್ ಮಾಡಬೇಕಾಗಬಹುದು.

ಚಿಕ್ಕಮಗಳೂರು:-ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂವನ್ನು ಮುಂದುವರೆ ಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾತ್ರಿ ಕಫ್ರ್ಯೂವನ್ನು ಜಾರಿಗೊಳಿಸಲಾಗುತ್ತಿದೆ.

ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಮತ್ತಷ್ಟು ದಿನ ರಾತ್ರಿ ಕಫ್ರ್ಯೂ ಮುಂದುವರೆಯಲಿದೆ. ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿಸಿ, ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಬಹುದು ಎಂದರು.

ಸದ್ಯಕ್ಕೆ ಲಾಕ್‍ಡೌನ್ ಮಾಡುವ ಉದ್ದೇಶ ಇಲ್ಲ. ಅನಿವಾರ್ಯವಾದರೆ ಮಾಡಬೇಕಾಗಬಹುದು. ಜನರ ಜೀವ ಉಳಿಸಲು ಆರ್ಥಿಕಾಭಿವೃದ್ಧಿ ಮತ್ತು ಶಾಲಾ -ಕಾಲೇಜು ಬಂದ್ ಮಾಡಬೇಕಾಗಬಹುದು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಕೋವಿಡ್ ನಿಯಮಗಳನ್ನು ಮುರಿಯದೆ ಸ್ವಯಂ ಅನುಸರಿಸಬೇಕು ಎಂದು ಹೇಳಿದರು.

ಸಾರ್ವಜನಿಕರ ಸಹಕಾರ ಸೂಕ್ತ ರೀತಿಯಲ್ಲಿ ದೊರೆಯದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಬಹುದು. ಈಗಾಗಲೇ ಮಾಸ್ಕ್ ಧರಿಸದೆ ಓಡಾಟ ಮಾಡುವುದು ಕಂಡು ಬರುತ್ತಿದೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಸಾವಿರಾರು ಜನ ಸೇರುತ್ತಿದ್ದಾರೆ. ಇದು ಸೋಂಕು ಹರಡಲು ಎಡೆಮಾಡಿಕೊಡಬಹುದು. ಈಗಾಗಲೇ ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಸಾವು-ನೋವುಗಳು ನಮ್ಮ ನೆನಪಿನಲ್ಲಿವೆ. ಅದಕ್ಕೆ ಅವಕಾಶ ಕೊಡದಂತೆ ತಡೆಯುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.