ಬೆಳಗಾವಿ: ಕರ್ನಾಟಕ ಸರ್ಕಾರದ ಬಹು ಮಹತ್ವಕಾಂಕ್ಷೆಯ ವಿವಾದಿತ ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಪರಿಷತ್ನಲ್ಲಿ ಮಂಡಿಸದೇ ವಾಪಸ್ ಪಡೆದಿದೆ. ಪಕ್ಷದಲ್ಲಿನ ಕೆಲವರ ವಿರೋಧ ಮತ್ತು ಪರಿಷತ್ನಲ್ಲಿ ಬಹುಮತ ಇಲ್ಲದ ಕಾರಣಕ್ಕೆ ಮಸೂದೆ ಮಂಡಿಸದೆ ವಾಪಸ್ ಪಡೆದಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಉಪಸಭಾಪತಿ ಪ್ರಾಣೇಶ್ರವರು ಬೆಳಗಾವಿಯಿಂದ ಬೇರೆಡೆಗೆ ಹೊರಟು ಹೋಗಿದ್ದರು. ಅವರನ್ನು ತುರ್ತಾಗಿ ಸುವರ್ಣ ಸೌಧಕ್ಕೆ ಬರುವಂತೆ ಸೂಚಿಸಲಾಗಿತ್ತು. ಅವರು ಬರುವಿಕೆಗಾಗಿ ಆಡಳಿತ ಪಕ್ಷ ಕಾಯುತ್ತಿತ್ತು. ಅದೇ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಅಧಿವೇಶನ ಆರಂಭಿಸುವಂತೆ ಸಭಾಪತಿ ಕೊಠಡಿಗೆ ತೆರಳಿ ಒತ್ತಾಯಿಸಿತ್ತಿದ್ದರು.
ಇನ್ನೊಂದೆಡೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ರವರು ಬಹಿರಂಗವಾಗಿಯೇ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಹುಮತವಿಲ್ಲದಿದ್ದಾಗ ಮಸೂದೆ ಮಂಡಿಸಿ ಅದಕ್ಕೆ ಸೋಲಾಗುವುದರಿಂದ ತಪ್ಪಿಸಿಕೊಳ್ಳಲು ಸರ್ಕಾರ ಹಿಂತೆಗೆದುಕೊಂಡಿದೆ.
ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಇತರರು ಸೇರಿ ಮಸೂದೆ ಮಂಡಿಸದಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ಅದನ್ನು ಕೋಟಾ ಶ್ರೀನಿವಾಸ ಪೂಜಾರಿಯವರು ಸದನಕ್ಕೆ ತಿಳಿಸಿದರು.
ಹೀಗಾಗಲೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ವಿಧೇಯಕ, 2021 ವನ್ನು ವಿಧಾನಸಭೆಯಲ್ಲಿ ಮಂಡಿಸಿ ಬಹುಮತದೊಂದಿಗೆ ಅಂಗೀಕಾರ ಮಾಡಲಾಗಿದೆ







