ಹೊಸದಿಲ್ಲಿ:ಕೆಮ್ಮಿನ ಔಷಧಿಯು ವಿಷವಾಗಿ ಪರಿಣಮಿಸಿ ಮೂರು ಮಕ್ಕಳು ಮೃತಪಟ್ಟ ದುರಂತ ಘಟನೆ ದಿಲ್ಲಿಯ ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಈ ಔಷಧಿಯನ್ನು ಮೊಹಲ್ಲಾ ಕ್ಲಿನಿಕ್ನ ವೈದ್ಯರು ಸೂಚಿಸಿದ್ದರು. ದಿಲ್ಲಿ ಸರ್ಕಾರವು ಮೂವರು ವೈದ್ಯರನ್ನು ವೈದ್ಯಕೀಯ ಸೇವೆಗಳಿಂದ ವಜಾಗೊಳಿಸಿದ್ದು, ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ರಾಜೀನಾಮೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಆಗ್ರಹಿಸಿವೆ. ಜತೆಗೆ ಮೃತಪಟ್ಟ ಮೂವರು ಮಕ್ಕಳ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿವೆ.
ಅಧಿಕಾರಿಗಳ ಪ್ರಕಾರ, ಕೇಂದ್ರ ಸರ್ಕಾರ ಸ್ವಾಮ್ಯದ ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ ಜೂನ್ 29 ರಿಂದ ನವೆಂಬರ್ 21ರವರೆಗೆ ಒಂದರಿಂದ ಆರು ವರ್ಷ ನಡುವಿನ ಮಕ್ಕಳು ಡೆಕ್ಸ್ಟ್ರಾಮೆಥಾರ್ಫನ್ (dextromethorphan ) ಔಷಧದಿಂದ ವಿಷಕಾರಿ ಅಂಶವನ್ನು ಸೇವಿಸಿದ 16 ಪ್ರಕರಣಗಳು ವರದಿಯಾಗಿವೆ. ‘ಬಹುತೇಕ ಮಕ್ಕಳಲ್ಲಿ ಉಸಿರಾಟದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಅವರಲ್ಲಿ ವಿಪರೀತ ಹಾನಿಗೆ ಒಳಗಾದ ಮೂರು ಮಕ್ಕಳು ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
‘ಕೆಲವು ದಿನಗಳ ಹಿಂದೆ ಔಷಧವೊಂದರ ಅಡ್ಡಪರಿಣಾಮದಿಂದ ಕಲಾವತಿ ಸರಣ್ ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಬಲಿಯಾಗಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬರುತ್ತಿದ್ದಂತೆಯೇ ಮೂವರು ವೈದ್ಯರನ್ನು ಸೇವೆಗಳಿಂದ ವಜಾಗೊಳಿಸಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ, ಘಟನೆಯ ಕುರಿತು ದಿಲ್ಲಿ ವೈದ್ಯಕೀಯ ಮಂಡಳಿಗೆ ದೂರು ನೀಡಲಾಗಿದೆ’ ಎಂದು ಜೈನ್ ಹೇಳಿದ್ದಾರೆ.
ದಿಲ್ಲಿ ಸರ್ಕಾರವು ಈ ಕುರಿತಾದ ತನಿಖೆಗೆ ನಾಲ್ವರು ಸದಸ್ಯರ ಸಮಿತಿಯೊಂದನ್ನು ಸೋಮವಾರ ರಚಿಸಿದೆ. ಆಗ್ನೇಯ ದಿಲ್ಲಿಯ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ. ಗೀತಾ ಅವರು ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಜುಲೈ 1ರಂದೇ ಆಸ್ಪತ್ರೆ ಆಡಳಿತ ಮಂಡಳಿ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ದಿಲ್ಲಿ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿತ್ತು. ಅಕ್ಟೋಬರ್ ಅಂತ್ಯದ ವೇಳೆಗೆ ಸಚಿವಾಲಯ ತನಿಖೆಯನ್ನು ಆರಂಭಿಸಿತ್ತು ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಕೆಮ್ಮು ಉಂಟಾದ ರೋಗಿಗಳಿಗೆ ಔಷಧವಾಗಿ ಡೆಕ್ಸ್ಟ್ರಾಮೆಥಾರ್ಫನ್ ಸಿರಪ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಅದನ್ನು ಎಲ್ಲರಿಗೂ ನೀಡುವಂತಿಲ್ಲ. ಅಧಿಕ ಡೋಸ್ ಸಿರಪ್ನಿಂದ ನಿದ್ರಾಹೀತನತೆ, ತಲೆ ಸುತ್ತುವಿಕೆ, ವಾಕರಿಕೆ, ಬಳಲಿಕೆ, ಉಸಿರಾಟದ ತೊಂದರೆ ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು. ಆದರೆ ಮಕ್ಕಳಿಗೆ ಮೊಹಲ್ಲಾ ಕ್ಲಿನಿಕ್ಗಳ ವೈದ್ಯರು ಈ ಸಿರಪ್ ನೀಡಿದ್ದರು ಎಂದು ಆರೋಪಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿನ ಸಾಮಾನ್ಯ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಡಾ. ಸುನಿಲ್ ಕುಮಾರ್ ಅವರು ಡಿ. 7ರಂದು ದಿಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, 4 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಡೆಕ್ಸ್ಟ್ರಾಮೆಥಾರ್ಫನ್ ಶಿಫಾರಸು ಮಾಡುವುದನ್ನು ನಿಲ್ಲಿಸುವಂತೆ ಎಲ್ಲ ಔಷಧಾಲಯಗಳು ಹಾಗೂ ಮೊಹಲ್ಲಾ ಕ್ಲಿನಿಕ್ಗಳ ವೈದ್ಯರಿಗೆ ಸೂಚಿಸುವಂತೆ ಹೇಳಿದ್ದರು.
ಸಾರ್ವಜನಿಕ ಹಿತಾಸಕ್ತಿಯಿಂದ ಒಮೆಗಾ ಫಾರ್ಮಾದ ಈ ಔಷಧವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದ್ದರು.
















ಇನ್ನಷ್ಟು ಸುದ್ದಿಗಳು
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ