janadhvani

Kannada Online News Paper

ದ.ಕ. ಜಿಲ್ಲೆಯಲ್ಲಿ ಅರಾಜಕತೆ- ಮುಸ್ಲಿಮ್ ಒಕ್ಕೂಟ ನಿಯೋಗದಿಂದ ಬೆಳಗಾವಿಯಲ್ಲಿ ಸಿದ್ದರಾಮಯ್ಯರ ಭೇಟಿ

ಶಾಂತಿ ಭಂಗ ಪ್ರಯತ್ನ, ಅಹಿತಕರ ಘಟನೆಗಳು, ಮತೀಯ ಉದ್ವಿಗ್ನತೆ, ನೈತಿಕ ಪೊಲೀಸು ಗಿರಿ ಮುಂತಾದ ಬಗ್ಗೆ ನಿಯೋಗ ಚರ್ಚಿಸಿದೆ

ಬೆಳಗಾವಿ, ಡಿ.20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ತಾರಕಕ್ಕೇರಿದ್ದು, ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುವಂತೆ ಕೋರಿ ಕೆ.ಅಶ್ರಫ್ ನೇತೃತ್ವದ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗ ಇಂದು ಬೆಳಗಾವಿಯಲ್ಲಿ ವಿರೋಧ ಪಕ್ಷ ನಾಯಕರಾದ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಸಿದ್ಧರಾಮಯ್ಯ ರವರನ್ನು ಭೇಟಿ ಮಾಡಿತು.

ದ.ಕ.ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ನಿರಂತರವಾಗಿ ನಡೆಯುತ್ತಿರುವ,ಶಾಂತಿ ಭಂಗ ಪ್ರಯತ್ನ, ಅಹಿತಕರ ಘಟನೆಗಳು, ಮತೀಯ ಉದ್ವಿಗ್ನತೆ, ನೈತಿಕ ಪೊಲೀಸು ಗಿರಿ, ಚೂರಿ ಇರಿತ, ಗುಂಪು ಹಲ್ಲೆ, ಪೊಲೀಸು ದೌರ್ಜನ್ಯ, ಉಪ್ಪಿನಂಗಡಿ ಪೊಲೀಸರಿಂದ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಅಸಾಂವಿಧಾನಿಕ ಲಾಠಿ ದೌರ್ಜನ್ಯ , ಧಾರ್ಮಿಕ ಕೇಂದ್ರಗಳ ಮೇಲೆ ಧಾಳಿ ಇತ್ಯಾದಿ ವಿಷಯಗಳ ಮೇಲೆ ಸದನದಲ್ಲಿ ದ್ವನಿ ಎತ್ತಲು ಮತ್ತು ಜಿಲ್ಲೆಯ ಸಮಸ್ಯೆಗಳನ್ನು ಸರಕಾರದ ಮುಂದೆ ಪ್ರತಿನಿಧಿಸುವ ಕುರಿತು ಮುಸ್ಲಿಂ ಒಕ್ಕೂಟ ನಿಯೋಗವು ಸಿದ್ದರಾಮಯ್ಯರೊಂದಿಗೆ ಚರ್ಚಿಸಿತು.

ಭೇಟಿ ಮಾಡಿದ ನಿಯೋಗಕ್ಕೆ, ಈ ಬಗ್ಗೆ ಸ್ಪಂದಿಸುವುದಾಗಿ ಮತ್ತು ಸದನದಲ್ಲಿ ಧ್ವನಿ ಎತ್ತುವ ಭರವಸೆ ನೀಡಿದರು ಮತ್ತು ಮುಂದೆ ದ.ಕ.ಜಿಲ್ಲೆ ಗೆ ಬೇಟಿ ನೀಡುವುದಾಗಿ ಕೂಡಾ ಹೇಳಿದ್ದಾರೆ.

ನಿಯೋಗದಲ್ಲಿ ಒಕ್ಕೂಟ ಸದಸ್ಯರಾದ ಅಬ್ದುಲ್ ಜಲೀಲ್ ಕೃಷ್ಣಾಪುರ (ಅದ್ದಾಕ), ಸಿ. ಎಮ್.ಮುಸ್ತಫಾ, ಮೊಯಿದಿನ್ ಮೋನು, ಅಶ್ರಫ್ ಬದ್ರಿಯಾ, ಮೊಹಮ್ಮದ್ ಸ್ವಾಲಿಹ್ ಬಜ್ಪೆ, ಷರೀಫ್ ದೇರಳಕಟ್ಟೆ, ಇಬ್ರಾಹಿಂ ಕೈಲಾರ್ ಮತ್ತಿತರರು ಉಪಸ್ಥಿತರಿದ್ದರು.