janadhvani

Kannada Online News Paper

ದ.ಕ.ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ ಕೊರೋನಾ- ಮರಣ ಸಂಖ್ಯೆ 29ಕ್ಕೆ ಏರಿಕೆ

ಮಂಗಳೂರು,ಜು.8: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಮಂಗಳವಾರದವರೆಗೆ 1,359 ಪ್ರಕರಣ ದೃಢಪಟ್ಟಿವೆ. ಈ ಪೈಕಿ 683 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಗೆ ಬುಧವಾರ ಒಂದೇ ದಿನ ಮೂರು ಮಂದಿ ಬಲಿಯಾಗಿದ್ದು ಒಟ್ಟು ಮೃತರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ.

ಬುಧವಾರ ಬೆಳಿಗ್ಗೆ ಭಟ್ಕಳ ಮೂಲದ 62 ವರ್ಷದ ವೃದ್ದೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳ್ಳಾಲದ 57 ವರ್ಷದ ಮಹಿಳೆಯೋರ್ವರು ರಕ್ತದೊತ್ತಡದ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮೃತಪಟ್ಟಿದ್ದಾರೆ. ಅಲ್ಲದೆ ಪುತ್ತೂರಿನ 32 ವರ್ಷದ ಬಾಣಂತಿಯೋರ್ವರು ಕೂಡ ಕೋವಿಡ್ ನಿಂದ ಮೃತಪಟ್ಟಿದ್ದು ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.