ನವದೆಹಲಿ: ಕೋವಿಡ್-19 ಸೋಂಕು ತಗುಲಿದ ವ್ಯಕ್ತಿಗೆ ಎರಡನೇ ಬಾರಿ ತಗುಲಬಹುದೇ? ಹೀಗೊಂದು ಹೊಸ ಸಂಶೋಧನೆಗೆ ಐಸಿಎಂಆರ್ ನ ಸಮಿತಿ ಮುಂದಾಗಿದೆ.
ಕೋವಿಡ್-19 ನಿಂದ ಚೇತರಿಕೆ ಕಂಡವರನ್ನು ಎಪಿಡೆಮಿಯೋಲಾಜಿಕಲ್ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿದೆ. ಇದರ ಮೊದಲ ಭಾಗವಾಗಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಕ್ವಾರಂಟೈನ್ ಹಾಗೂ ಐಸೊಲೇಷನ್ ಗಳಲ್ಲಿರುವ ಕೊರೋನಾ ವೈರಸ್ ನಿಂದ ಚೇತರಿಕೆ ಕಂಡ ರೋಗಿಗಳ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.
ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿ ಚೇತರಿಕೆ ಕಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳ ಜೀವಿತಾವಧಿಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅದರೆ ವೈರಾಣುಗಳನ್ನು ಎದುರಿಸಲು ಸೋಂಕಿತ ವ್ಯಕ್ತಿಗಳಲ್ಲಿ ಟಿ-ಸೆಲ್ ಮೀಡಿಯೇಟೆಡ್ ರೋಗನಿರೋಧಕ ಉತ್ಪತ್ತಿಯಾಗಿರುವುದು ಕಂಡುಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಮೆಮೊರಿ ಸೆಲ್ ಗಳಾಗಿರುವ ಈ ಟಿ-ಸೆಲ್ ಗಳು ಪ್ರತಿಕಾಯಗಳು ಕುಸಿತ ಕಂಡಾಗಲೂ ಸಹ ಆ ನಿರ್ದಿಷ್ಟ ವ್ಯಕ್ತಿ ಮತ್ತೊಮ್ಮೆ ರೋಗ ಲಕ್ಷಣಗಳಿಗೆ ತೆರೆದುಕೊಂಡರೂ ಸಹ ರೋಗಕ್ಕೆ ತುತ್ತಾಗುವುದರಿಂದ ದೀರ್ಘಾವಧಿಯ ರಕ್ಷಣೆ ಪಡೆಯುತ್ತಾನೆ ಎಂದು ಐಸಿಎಂ ಆರ್ ವ್ಯಾಪ್ತಿಯಲ್ಲಿರುವ ಕೋವಿಡ್ -19 ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ತಜ್ಞರ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಆದರೆ ಟಿ-ಸೆಲ್ ಗಳನ್ನು ನಾವು ಇಮ್ಯುನಿಟಿ ಪಾಸ್ಪೋರ್ಟ್ ಎಂದು ಹೇಳಲು ಸಾಧ್ಯವಿಲ್ಲ. ರೋಗಕ್ಕೆ ತೆರೆದುಕೊಂಡ ಜನರಿಗೆ ಕೊರೋನಾದಿಂದ ದೀರ್ಘಾವಧಿಯ ರಕ್ಷಣೆ ಇರುತ್ತದೆ ಎಂಬುದನ್ನು ಮನಗಂಡಿದ್ದೇವೆ, ಇದನ್ನೇ ಬಳಸಿಕೊಂಡು ಇದರ ಪರಿಣಾಮಗಳನ್ನು ಅಧ್ಯಯನ ನಡೆಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ.






