janadhvani

Kannada Online News Paper

ದ.ಕ.ಜಿಲ್ಲೆ: 26 ವರ್ಷದ ಯುವಕ ಕೊರೊನಾಗೆ ಬಲಿ- 5 ಹೊಸ ಪ್ರಕರಣ ದೃಢ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 5 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಂದು ಮರಣ ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋರೊನಾ ಸೋಂಕಿತರ ಸಂಖ್ಯೆ 268 ಕ್ಕೆ ಏರಿಕೆಯಾಗಿದೆ.

ಕೋವಿಡ್-19 ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟನೇ ಬಲಿಯಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ 26 ವರ್ಷದ ಯುವಕ ಕೋವಿಡ್-19 ಸೋಂಕಿನ ಕಾರಣದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಹಾರಾಷ್ಟ್ರದಿಂದ ಬಂದು ಕ್ವಾರೆಂಟೈನ್ ‌ಮುಗಿಸಿ ಮನೆಗೆ ಹೋಗಿದ್ದ 26 ವರ್ಷದ ಯುವಕ ಕಿಡ್ನಿ ಸಮಸ್ಯೆ ಹಿನ್ನೆಲೆ ಮತ್ತೆ ‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಯುವಕನಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು, ಆ ವೇಳೆ ಆತನಿಗೆ ಕೋವಿಡ್-19 ಸೋಂಕು ಇರುವುದು ದೃಢವಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಎಂಟನೇ ಬಲಿಯಾಗಿದೆ. ಇದರಲ್ಲಿ ಏಳು ಮಂದಿ ಸೋಂಕಿನ ಕಾರಣದಿಂದ ಬಲಿಯಾಗಿದ್ದರೆ, ಓರ್ವ ಸೋಂಕಿತ ಅನ್ಯ ಕಾರಣದಿಂದ ಮರಣ ಹೊಂದಿದ್ದರು.