janadhvani

Kannada Online News Paper

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು- ಜಯಾ ಬಚ್ಚನ್ ಹೇಳಿಕೆ ವಿವಾದ

ನವದೆಹಲಿ: ಹೈದರಾಬಾದ್ ವಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಪ್ರತಿಧ್ವನಿಸಿದ್ದು, ಈ ಕುರಿತಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.

ಮಹಿಳೆಯರ ಮೇಲಿನ ಅಪರಾಧ ಘಟನೆಗಳು ಹೆಚ್ಚಾಗುತ್ತಿರುವ ವಿಚಾರದ ಬಗ್ಗೆ ನಡೆದ ಚರ್ಚೆಯೊಂದರಲ್ಲಿ ಮಾತನಾಡುತ್ತಿದ್ದ ಜಯಾ ಬಚ್ಚನ್, ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ತಂದು ನಿಲ್ಲಿಸಿ ಥಳಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅವರ ಈ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದು, ಒಬ್ಬ ಜವಾಬ್ದಾರಿಯುತ ಸಂಸದೆಯಾಗಿ ಜಯಾ ಬಚ್ಚನ್ ಅವರು ಹಿಂಸಾತ್ಮಕ ಮಾರ್ಗಕ್ಕೆ ಕರೆ ಕೊಟ್ಟಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್​ನಲ್ಲಿ ಕಳೆದ ವಾರ 26 ವರ್ಷದ ಪಶುವೈದ್ಯೆಯೊಬ್ಬರ ಮೇಲೆ ನಾಲ್ಕು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆಗೈದಿದ್ದರು. ಮಹಿಳೆಯ ಟಯರ್ ಪಂಕ್ಚರ್ ಆದಾಗ ಸಹಾಯ ಮಾಡುವ ನೆಪದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದರು. ಈ ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.