janadhvani

Kannada Online News Paper

ಇಡಿ ಕಚೇರಿಯಲ್ಲಿ ತಡರಾತ್ರಿವರೆಗೂ ನಡೆಯಲಿದೆ ಡಿಕೆಶಿ ವಿಚಾರಣೆ

ನವದೆಹಲಿ ( ಆ.30) : ದೆಹಲಿಯಲ್ಲಿ ಇಡಿ ವಿಚಾರಣೆಗೆ ಒಳಗಾಗಿರುವ ಮಾಜಿ ಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಡರಾತ್ರಿವರೆಗೂ ವಿಚಾರಣೆ ಮಾಡಲು ನಡೆಸುವ ಸಾಧ್ಯತೆ ಇದೆ. ರಾತ್ರಿ ಹತ್ತು ಗಂಟೆಗೆ ಮೊದಲ ಸುತ್ತಿನ ವಿಚಾರಣೆ ಮುಗಿಸಿರುವ ಅಧಿಕಾರಿಗಳು ಊಟದ ನಂತರ ಎರಡನೇ ಸುತ್ತಿನ ವಿಚಾರಣೆ ನಡೆಸಲಿದ್ದಾರೆ.

ಜಾರಿ ನಿರ್ದೇಶನಾಲಯದ ಜಂಟಿ ಆಯುಕ್ತೆ ಮೋನಿಕಾ‌ ಶರ್ಮಾ‌ ನೇತೃತ್ವದಲ್ಲಿ ಐದು ಅಧಿಕಾರಿಗಳ ತಂಡ ಡಿಕೆಶಿ ಅವರನ್ನು ವಿಚಾರಣೆ ನಡೆಸುತ್ತಿದೆ. ದೆಹಲಿಯಲ್ಲಿ ಸಿಕ್ಕ ಹಣದ ಮೂಲ ಮತ್ತು ಅದರ ದಾಖಲೆ ಸುತ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಡಿಕೆಶಿ ಅವರು ಚಾರ್ಟೆಡ್ ಅಕೌಂಟೆಂಟ್ ಸಹಕಾರ ಪಡೆಯಲು ಅವಕಾಶ ಕೇಳಿದರು ಎನ್ನಲಾಗಿದೆ. ಫೋನ್ ಮೂಲಕ ಚಾರ್ಟೆಡ್ ಅಕೌಂಟೆಂಟ್ ಅವರ ಸಹಾಯ ಪಡೆಯಲು ಯತ್ನಿಸಿದ್ದಾರೆ. ಆದರೆ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಗೆ ಅನುಮತಿ ನಿರಾಕರಿಸಿದರು ಎನ್ನಲಾಗಿದೆ. ಡಿಕೆಶಿ ಜತೆ ಸಂಸದ ಡಿಕೆ ಸುರೇಶ್ ಇದ್ದಾರೆ. ಉಳಿದಂತೆ ಇ.ಡಿ. ಕಚೇರಿಗೆ ಎಲ್.ಆರ್.ಶಿವರಾಮೇಗೌಡ ಕೂಡ ಭೇಟಿ ನೀಡಿದ್ದಾರೆ.

ವಿಚಾರಣೆ ವೇಳೆಯೇ ಬಂಧಿಸುವ ಸಾಧ್ಯತೆ ಇರುವುದರಿಂದ ಡಿಕೆ ಶಿವಕುಮಾರ್ ಅವರು ಇಡಿ ಕಚೇರಿಗೆ ಮೂವರು ವಕೀಲರನ್ನು ಕರೆಸಿಕೊಂಡಿದ್ದಾರೆ. ಆದರೆ ವಕೀಲರ ಸಹಕಾರ ಪಡೆಯಲು ಅಧಿಕಾರಿಗಳು ಮಾತ್ರ ಒಪ್ಪಿಲ್ಲ. ತಮ್ಮನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಬಹುದೆಂಬ ಭಯ ಡಿಕೆಶಿಗೆ ಎದುರಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರೆ ವಾದ ಮಾಡಲು ವಕೀಲರನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ತಡರಾತ್ರಿವರೆಗೂ ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ಇಡಿ‌ ಕಚೇರಿಗೆ ಅಧಿಕಾರಿಗಳಿಗೆ ಹಾಗೂ ಡಿಕೆ ಶಿವಕುಮಾರ್ ಗೂ ಇಡಿ ಕಚೇರಿಯಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ ಎರಡನೇ ಹಂತದ ವಿಚಾರಣೆಯಲ್ಲಿ ಡಿಕೆಶಿಗೆ ಅಧಿಕಾರಿಗಳು ಪಿನ್ ಟು ಪಿನ್ ಮಾಹಿತಿ ಕೇಳಲಿದ್ದಾರೆ ಎನ್ನಲಾಗಿದೆ.