janadhvani

Kannada Online News Paper

ಬೆಂಗಳೂರು: ಅನುಮಾನಾಸ್ಪದ ವಸ್ತು ಸ್ಫೋಟ, ಭಯಪಡುವ ಅಗತ್ಯವಿಲ್ಲ- ಡಿಸಿಪಿ ದೇವರಾಜ್

ಬೆಂಗಳೂರು: ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್‌ ಮನೆ ಬಳಿ ಸ್ಫೋಟ ಸಂಭವಿಸಿದ್ದು, ಮನೆಗೆಲಸ ಮಾಡುತ್ತಿದ್ದ ವೆಂಕಟೇಶ್‌ (45) ಎಂಬವರು ಮೃತಪಟ್ಟಿದ್ದಾರೆ.ಸ್ಫೋಟದ ರಭಸಕ್ಕೆ ಮೃತನ ದೇಹ ಛಿದ್ರವಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ವೆಂಕಟೇಶ್ ವೈಯಾಲಿಕಾವಲ್‌ನ ದೋಬಿಗಾಟ್‌ನಲ್ಲಿ ಕುಟುಂಬಸ್ಥರ ಜೊತೆ ವಾಸವಾಗಿದ್ದರು.ಅವರು ಬೆಳ್ಳಿಗೆ ಹತ್ತು ಗಂಟೆ ಸುಮಾರಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಮುನಿರತ್ನ ಮನೆ ಮುಂದೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಆತನ ಮೊಬೈಲ್‌, ಮನೆಯ ಬಾಗಿಲು ಹಾಗೂ ಗೋಡೆ ಛಿದ್ರವಾಗಿದೆ.

ಕಮಿಷನರ್‌ ಟಿ. ಸುನೀಲ್ ಕುಮಾರ್ ಹೇಳಿಕೆ
‘ವೆಂಕಟೇಶ್‌ ಬೆಳಿಗ್ಗೆ 9-15ಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಭೂಮಿಯೊಳಗಿಂದ ಕ್ರೇಟ್ ಮಾದರಿಯ ವಸ್ತು ಸ್ಫೋಟ ಆಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಫ್‌ಎಸ್‌ಎಲ್‌ ತಂಡ ಪರಿಶೀಲನೆ ನಡೆಸಿದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಎನ್‌ಐಎ ಸೇರಿದಂತೆ ಎಲ್ಲಾ ತನಿಖಾ ತಂಡಗಳಿಗೂ ವಿಚಾರ ಮುಟ್ಟಿಸಲಾಗುವುದು’ ಎಂದು ಹೇಳಿದರು.

ಭಯಪಡುವ ಅಗತ್ಯವಿಲ್ಲ: ಡಿಸಿಪಿ ದೇವರಾಜ್
ಯಾವುದೇ ಭಯಪಡುವ ಅಗತ್ಯವಿಲ್ಲ. ಪ್ಲ್ಯಾಸ್ಟಿಕ್‌‌ಗೆ ಬಳಸುವ ಕೆಲ ಕೆಮಿಕಲ್ ಬಳಸಿದ್ರಿಂದ ಹೀಗೆ ಆಗಿದೆ ಎಂದು ಡಿಸಿಪಿ ದೇವರಾಜ್‌ ಹೇಳಿದ್ದಾರೆ.
ಸದ್ಯ ಮೃತ ದೇಹ ಪೋಸ್ಟ್ ಮಾರ್ಟಮ್ ನಡಿತಿದೆ. ಜತೆಗೆ ನಿವೃತ್ತ ಎಫ್‌ಎಸ್‌ಎಲ್‌ ತಜ್ಞ ರವೀಂದ್ರ ಅವರು ಸಹ ಇಡೀ ಸ್ಥಳ ಪರಿಶೀಲನೆ ನಡಿಸಿದ್ದಾರೆ. ಇದು ಸ್ಫೋಟಗೊಂಡ ಹಿನ್ನೆಲೆ ಸುಮೊಟೊ ಕೇಸ್ ದಾಖಲು ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದರು.
ಕೆಮಿಕಲ್ ಎಕ್ಸ್‌ಪ್ಲೂಸಿವ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ‌. ಸದ್ಯ ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಒಮ್ಮೆ ಎಲ್ಲವೂ ಪರಿಶೀಲನೆ ನಡೆದ ಬಳಿಕ ಎಲ್ಲವೂ ತಿಳಿದು ಬರಲಿದೆ ಎಂದು ಅವರು ಮಾಹಿತಿ ನೀಡಿದರು.