janadhvani

Kannada Online News Paper

ರಫೇಲ್ ಒಪ್ಪಂದ: ಕೋರ್ಟಿಗೆ ವರದಿ ಸಲ್ಲಿಸುವಲ್ಲಿ ತಪ್ಪಾಗಿದೆ- ಅಟಾರ್ನಿ ಜನರಲ್

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸುವಲ್ಲಿ ತಪ್ಪಾಗಿದೆ. ಏಕೆಂದರೆ ಮೂರು ಪುಟಗಳು ನಾಪತ್ತೆಯಾಗಿವೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ.

ಗುರುವಾರ ರಫೇಲ್ ಯುದ್ಧ ವಿಮಾನಗಳ ವಿಚಾರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ ಸಿನ್ಹ ಅವರ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಂದೆ ಕೆ.ಕೆ. ವೇಣುಗೋಪಾಲ್ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ದಾಖಲೆಗಳನ್ನು ಸಲ್ಲಿಸುವಾಗ ಮಾಡಿರುವ ಪ್ರಮಾದದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ರಫೇಲ್ ಏರ್ ಕ್ರಾಫ್ಟ್ ಬೆಲೆ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ನೀಡಿದ ದಾಖಲೆಗಳನ್ನು ಪುರಾವೆಗಳೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಆ ಸಂಬಂಧಿಸಿದ ಪುಟಗಳು ನಾಪತ್ತೆಯಾಗಿವೆ. ಗೌಪ್ಯ ದಾಖಲೆಗಳನ್ನು ಎವಿಡೆನ್ಸ್ ಆಕ್ಟ್ ಅಡಿಯಲ್ಲಿ ಸಾಕ್ಷಿಯಾಗಿ ಸ್ವೀಕರಿಸಲಾಗುವುದಿಲ್ಲ ಮತ್ತು ಅಂತಹ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಕ್ಕೂ ಸಾಧ್ಯವಿಲ್ಲ ಎಂದು ಹೇಳಿದರು.