ಮಕ್ಕತುಲ್ ಮುಕರ್ರಮಃ, ಮೇ.26: ವಿಶ್ವದ ನಾನಾ ಭಾಗಗಳಿಂದ ಆಗಮಿಸಿರುವ 20 ಲಕ್ಷಕ್ಕೂ ಹೆಚ್ಚು ಹಜ್ ಯಾತ್ರಿಕರು ಇಂದು (ಮಂಗಳವಾರ) ಐತಿಹಾಸಿಕ ಅರಫಾತ್ ಮೈದಾನದಲ್ಲಿ ಒಟ್ಟುಗೂಡಲಿದ್ದಾರೆ. ಹಜ್ನ ಆತ್ಮ ಎಂದೇ ಪರಿಗಣಿಸಲ್ಪಟ್ಟಿರುವ ಈ ಪವಿತ್ರ ಕ್ಷಣಗಳಿಗೆ ಸಾಕ್ಷಿಯಾಗಲು ವಿಶ್ವಾಸಿಗಳ ಮಹಾ ಪ್ರವಾಹವನ್ನು ಬರಮಾಡಿಕೊಳ್ಳಲು ಅರಫಾತ್ ಮೈದಾನವು ಸಂಪೂರ್ಣವಾಗಿ ಸಜ್ಜಾಗಿದೆ.
ಹಜ್ನ ಅತ್ಯಂತ ಪ್ರಮುಖ ವಿಧಿಯಾದ ಅರಫಾತ್ ಸಂಗಮಕ್ಕಾಗಿ ವಿಶ್ವದ ಮುಸ್ಲಿಮರ ಪ್ರತಿನಿಧಿಗಳಾಗಿ ಒಟ್ಟುಗೂಡುವ ಹಾಜಿಗಳು ‘ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್’ ಎಂಬ ತಲ್ಬಿಯಾ ಮಂತ್ರ ಘೋಷಗಳೊಂದಿಗೆ ದುಲ್ ಹಜ್ 9ನೇ ದಿನವಾದ ಇಂದು ಬೆಳಗ್ಗೆಯಿಂದಲೇ ಅರಫಾಕ್ಕೆ ಆಗಮಿಸಿದ್ದಾರೆ.
ಮಸ್ಜಿದ್ ನಮಿರಾದಲ್ಲಿ ನಡೆಯುವ ಖುತುಬಾ ದೊಂದಿಗೆ ಅರಫಾ ಸಂಗಮ ಆರಂಭವಾಗಲಿದೆ. 150 ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 20 ಲಕ್ಷಕ್ಕೂ ಹೆಚ್ಚು ಹಜ್ಜಾಜ್ಗಳು ಅರಫಾದಲ್ಲಿ ಸಂಗಮಿಸುತ್ತಾರೆ. ವರ್ಣ, ಭಾಷೆ, ವೇಷಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಸಮಾನರಾಗಿ ಒಗ್ಗೂಡುವ ಜಗತ್ತಿನ ಏಕೈಕ ಮಹಾ ಮಾನವತಾ ಸಂಗಮವಾಗಿದೆ ಅರಫಾ ಸಂಗಮ.
ಪ್ರವಾದಿ ಮುಹಮ್ಮದ್ ಪೈಗಂಬರರು ತಮ್ಮ ಹಜ್ ಸಮಯದಲ್ಲಿ ನೀಡಿದ ವಿದಾಯ ಭಾಷಣವನ್ನು ಸ್ಮರಿಸುತ್ತಾ ನಡೆಯುವ ಖುತುಬಾದ ವನ್ನು ನೇತೃತ್ವವನ್ನು ಈ ವರ್ಷ ಮದೀನಾದ ಪ್ರಮುಖ ವಿದ್ವಾಂಸ ಮತ್ತು ಪ್ರವಾದಿ ಮಸೀದಿಯ ಇಮಾಮ್ ಆದ ಡಾ. ಅಹ್ಮದ್ ಅಲ್ ಹುದೈಫಿ ವಹಿಸಲಿದ್ದಾರೆ. ಪ್ರವಾದಿ (ಸ.ಅ) ರು ನಡೆಸಿದಂತೆ, ಖುತುಬಾವನ್ನು ಅರಬಿ ಭಾಷಯಲ್ಲೇ ನಿರ್ವಹಿಸಲಾಗುತ್ತದೆ. ಇದು ಅರಾಫಾದ ನಮಿರಾ ಮಸೀದಿಯಲ್ಲಿ ನಡೆಯಲಿದೆ. ಮಸೀದಿಯ ಒಳಗಡೆ 4 ಲಕ್ಷ ಯಾತ್ರಾರ್ಥಿಗಳಿಗೆ ಸೌಲಭ್ಯವಿದೆ. ಉಳಿದ 16 ಲಕ್ಷಕ್ಕೂ ಮಿಕ್ಕ ಹಜ್ಜಾಜ್ಗಳು ಮಸೀದಿಯ ಹೊರಗಿನ ಅರಫಾ ಮೈದಾನದಲ್ಲಿ ಮತ್ತು ಕರುಣೆಯ ಬೆಟ್ಟ ಎಂಬ ಅರ್ಥವುಳ್ಳ ಜಬಲು ರ್ರಹ್ಮಾ ದ ತಪ್ಪಲಿನಲ್ಲಿ ವಿವಿಧ ಟೆಂಟ್ಗಳಲ್ಲಿ ಖುತುಬಾವನ್ನು ಆಲಿಸುವರು. ವಿಶ್ವದ ಸುಮಾರು 50 ಭಾಷೆಗಳಲ್ಲಿ ಖುತುಬಾದ ನೇರ ಅನುವಾದವು ಲಭ್ಯವಾಗುವಂತೆ ಮಾಡಲು ಸೌದಿ ಅಧಿಕಾರಿಗಳು ವ್ಯಾಪಕ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಸೋಮವಾರ ರಾತ್ರಿಯಿಂದಲೇ ಮಿನಾ ಕಣಿವೆಯಲ್ಲಿ ತಂಗಿದ್ದ ಲಕ್ಷಾಂತರ ಯಾತ್ರಿಕರು ಮುಂಜಾನೆಯಿಂದಲೇ ಅರಫಾತ್ ಮೈದಾನದತ್ತ ಸಾಗಲು ಆರಂಭಿಸಿದ್ದರು. ಮಧ್ಯಾಹ್ನದಿಂದ ಸೂರ್ಯಾಸ್ತದವರೆಗೆ ಅರಫಾತ್ನ ಮುಖ್ಯ ಸಮಾವೇಶ ನಡೆಯಲಿದೆ. ಖುತುಬಾ ನಂತರ ಲುಹರ್ ಮತ್ತು ಅಸರ್ ನಮಾಝ್ ಸಂಕ್ಷಿಪ್ತವಾಗಿ (ಜಮ್ಅ್) ನಿರ್ವಹಿಸಿದ ಬಳಿಕ ಯಾತ್ರಿಕರು ಸಂಪೂರ್ಣವಾಗಿ ಅಲ್ಲಾಹನಸ್ಮರಣೆ ಮತ್ತು ಪಾಪಕ್ಷಮಾಪಣಾ ಪ್ರಾರ್ಥನೆಗಳಲ್ಲಿ ಮಗ್ನರಾಗಲಿದ್ದಾರೆ. ಅರಫಾ ಸಂಗಮದಲ್ಲಿ ಭಾಗಿಯಾಗದವರಿಗೆ ಹಜ್ಜ್ ನ ಪುಣ್ಯ ಸಿಗುವುದಿಲ್ಲ. ಆದ್ದರಿಂದ ಅನಾರೋಗ್ಯ ಪೀಡಿತ ಯಾತ್ರಿಕರನ್ನು ಸಮಯಕ್ಕೆ ಸರಿಯಾಗಿ ಅರಫಾ ಸಂಗಮಕ್ಕೆ ತಲುಪಿಸಲು ಸಾವಿರಾರು ಆಂಬುಲೆನ್ಸ್ ಗಳನ್ನು ಸಜ್ಜುಗೊಳಿಸಲಾಗಿದೆ. ಹಜ್ಜಾಜ್ ಗಳು ಅರಫಾದಲ್ಲಿ ಸಂಗಮಿಸುವ ದುಲ್ ಹಜ್ ಒಂಬತ್ತರಂದು ವಿಶ್ವದಾದ್ಯಂತ ಮುಸ್ಲಿಮರು ಅರಫಾ ಉಪವಾಸವನ್ನು ಆಚರಿಸಿ ಹಜ್ ಯಾತ್ರಿಕರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವರು.
ಸೂರ್ಯಾಸ್ತದ ನಂತರ, ಯಾತ್ರಿಕರು ಮುಝ್ದಲಿಫಾಗೆ ತೆರಳುತ್ತಾರೆ.ಮುಕ್ತ ಆಕಾಶದಡಿಯಲ್ಲಿ ರಾತ್ರಿ ಅಲ್ಲಿ ವಿಶ್ರಮಿಸಲಿದ್ದಾರೆ. ಮಗ್ರಿಬ್ ಮತ್ತು ಇಶಾ ನಮಾಜ್ ಅಲ್ಲಿ ನಿರ್ವಹಿಸುವರು. ಮಧ್ಯರಾತ್ರಿಯ ನಂತರ ಮಿನಾಗೆ ಹಿಂದಿರುಗುತ್ತಾರೆ. ಮೊದಲ ದಿನ ಜಮ್ರತುಲ್ ಅಖಬಾದಲ್ಲಿ ಶೈತಾನನ ಪ್ರತಿಕೃತಿಗೆ ಕಲ್ಲು ಹೊಡೆಯುವ ಮತ್ತು ತಲೆಕೂದಲು ಕತ್ತರಿಸುವ ವಿಧಿಯೊಂದಿಗೆ ಹಜ್ ಕರ್ಮಗಳಿಗೆ ಅರ್ಧವಿರಾಮ ಸಿಗಲಿದೆ. ತದನಂತರ ಮಿನಾದಲ್ಲಿರುವ ಡೇರೆಗಳಿಗೆ ಮರಳುವ ಯಾತ್ರಿಕರು ಮುಂಬರುವ ದಿನಗಳಲ್ಲಿ ಬಾಕಿ ಉಳಿದಿರುವ ವಿಧಿವಿಧಾನಗಳನ್ನು ಪೂರ್ಣಗೊಳಿಸಲಿದ್ದಾರೆ.
















ಇನ್ನಷ್ಟು ಸುದ್ದಿಗಳು
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಇಸ್ಲಾಂಪುರ ಹೆಸರನ್ನು ಶ್ರೀರಾಮಪುರ ಎಂದು ಬದಲಿಸಬೇಕು- ಬಿಜೆಪಿ ಶಾಸಕರ ಬೇಡಿಕೆಗೆ ಗ್ರಾಮಸ್ಥರ ವಿರೋಧ