janadhvani

Kannada Online News Paper

ಪಹಲ್ಗಾಮ್ ಹತ್ಯಾಕಾಂಡ ಅಮಾನವೀಯ ಕೃತ್ಯ- ವಿವಿಧ ಸಂಘಟನೆಗಳಿಂದ ಖಂಡನೆ

ಇಂತಹ ಘಟನೆಗಳ ಉದ್ದೇಶ ಭಯ, ದ್ವೇಷ ಮತ್ತು ಕೋಮುವಾದವನ್ನು ಉತ್ತೇಜಿಸುವುದು ಮಾತ್ರ,

ಕೊಪ್ಪಳ, ಏಪ್ರಿಲ್ 23: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ವಿವಿಧ ಸಂಘಟನೆಗಳು ತೀವ್ರ ದುಃಖವನ್ನು ವ್ಯಕ್ತಪಡಿಸಿದೆ.

ಜನಪರ ಸಂಘಟನೆಗಳ ಒಕ್ಕೂಟ ಜಿಲ್ಲಾ ಅಧ್ಯಕ್ಷ ಎಸ್.ಎ.ಗಫಾರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ, ಜಮಿಯತ್ ಉಲಮಾ-ಎ-ಹಿಂದ್ ಮುಖಂಡ ಮುನೀರ್ ಅಹ್ಮದ್ ಸಿದ್ದೀಕಿ, ಮೊಹಮ್ಮದ್ ಕಿರ್ಮಾನಿ ಖಾಝಿ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಮುಖಂಡ ಗೌಸ್ ನೀಲಿ ಮುಂತಾದವರು ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.

28 ಅಮಾಯಕ ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ಅಮಾನವೀಯ ಕೃತ್ಯವಾಗಿದ್ದು, ಇದನ್ನು ಯಾವುದೇ ಧರ್ಮಕ್ಕೆ ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದನ್ನು ಇಸ್ಲಾಂನೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿರುವವರು ಇಸ್ಲಾಂನ ನಿಜವಾದ ಬೋಧನೆಗಳ ಬಗ್ಗೆ ಅಜ್ಞಾನಿಗಳು. ಇಸ್ಲಾಂನಲ್ಲಿ ಅಮಾಯಕ ವ್ಯಕ್ತಿಯೊಬ್ಬನ ಅಪ್ರಚೋದಿತ ಹತ್ಯೆಯನ್ನು ಇಡೀ ಮಾನವಕುಲದ ಕೊಲೆ ಎಂದು ಪರಿಗಣಿಸಲಾಗುತ್ತದೆ.ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಎಲ್ಲಾ ನಾಗರಿಕರಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ಶಾಂತಿ, ಸಹೋದರತ್ವ,ಭ್ರಾತೃತ್ವ ಮತ್ತು ಸಹಿಷ್ಣುತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡುತ್ತದೆ. ಇಂತಹ ಘಟನೆಗಳ ಉದ್ದೇಶ ಭಯ, ದ್ವೇಷ ಮತ್ತು ಕೋಮುವಾದವನ್ನು ಉತ್ತೇಜಿಸುವುದು ಮಾತ್ರ, ಇದನ್ನು ನಿಲ್ಲಿಸಲು ನಾವು ನೀವೆಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.