ಕೋಝಿಕ್ಕೋಡ್ | ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತದ ಶಾಂತಿಯುತ ಜೀವನದ ವಿರುದ್ಧದ ಹೇಯ ಆಕ್ರಮಣವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಪ್ರಪಂಚದ ವಿವಿಧ ಭಾಗಗಳಿಂದ ಪ್ರವಾಸಿಗರು ಸೇರುವ ಸಮಯದಲ್ಲಿ ಈ ದಾಳಿಯನ್ನು ಆಯ್ಕೆ ಮಾಡಲಾಗಿದೆ. ಜನರೆಡೆಯಲ್ಲಿ ಭಯವನ್ನುಂಟು ಮಾಡಿ ಕಾಶ್ಮೀರಕ್ಕೆ ಜನರ ಹರಿವನ್ನು ನಿಲ್ಲಿಸುವುದು ಮತ್ತು ಶಾಂತಿಯುತ ವಾತಾವರಣವನ್ನು ಮುರಿದು ಕಾಶ್ಮೀರಿಗಳನ್ನು ತೊಂದರೆಗೀಡಾದ ಜೀವನಕ್ಕೆ ತಳ್ಳುವುದು ಈ ದಾಳಿಯ ಉದ್ದೇಶವಾಗಿದೆ.
ಭಯೋತ್ಪಾದನೆಯಿಂದ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ. ಅಂತಹ ಹೀನ ಕೃತ್ಯಗಳ ಮುಂದೆ ದೇಶವು ತಲೆ ಬಾಗುವುದಿಲ್ಲ. ಅಪರಾಧಿಗಳನ್ನು ಬಂಧಿಸಿ ಶಿಕ್ಷೆಯನ್ನು ಖಾತ್ರಿಪಡಿಸುವುದರೊಂದಿಗೆ ಕಾಶ್ಮೀರಿಗಳ ಜೀವನವನ್ನು ಅವರ ಸಾಮಾನ್ಯ ಸ್ಥಿತಿಗೆ ಸುಲಭವಾಗಿ ಮರುಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಕಾಂತಪುರಂ ಹೇಳಿದರು. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ಗ್ರ್ಯಾಂಡ್ ಮುಫ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ.