ಕೋಝಿಕ್ಕೋಡ್ | ಈ ವರ್ಷ ಭಾರತದ ಖಾಸಗಿ ಹಜ್ ಗ್ರೂಪುಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವವರ ಪ್ರಯಾಣದ ಬಗ್ಗೆ ನಡೆಯುತ್ತಿರುವ ಅನಿಶ್ಚಿತತೆಯ ನಡುವೆ, ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೋರಿದ್ದಾರೆ.
ನುಸುಕ್ ಪ್ಲಾಟ್ಫಾರ್ಮ್ ಮೂಲಕ ಚಟುವಟಿಕೆಗಳು ಪೂರ್ಣಗೊಳಿಸಲಾಗಿಲ್ಲ ಎಂಬ ಕಾರಣ ಕೋಟಾವನ್ನು ತಡೆಹಿಡಿಯಲಾಗಿದೆ. ನುಸುಕ್ ಪೋರ್ಟಲ್ ಅನ್ನು ಸಹ ಮುಚ್ಚಲಾಗಿದೆ. ಈ ಬಾರಿ 52,507 ಸೀಟುಗಳನ್ನು ಖಾಸಗಿ ಗುಂಪುಗಳಿಗೆ ಹಂಚಿಕೆ ಮಾಡಲಾಗಿತ್ತು.
ಸೌದಿ ಅರೇಬಿಯಾದಲ್ಲಿನ ತಮ್ಮ ಸೇವಾ ಪೂರೈಕೆದಾರರು, ವಸತಿ ಮತ್ತು ಸಾರಿಗೆ ಒಪ್ಪಂದದ ಪಾವತಿಗಳು ಒಳಗೊಂಡಂತೆ ಚಟುವಟಿಕೆಗಳನ್ನು ಕೆಲವು ಖಾಸಗಿ ಗ್ರೂಪುಗಳು ಪೂರ್ಣಗೊಳಿಸದ ಕಾರಣ ಸಂಪೂರ್ಣ ಕೋಟಾವನ್ನು ತಡೆಹಿಡಿಯಲಾಗುತ್ತಿರುವ ಪರಿಸ್ಥಿತಿ ಉಂಟಾಗಿದೆ. ಪ್ರತಿ ವರ್ಷ ಹಜ್ ಯಾತ್ರೆಯನ್ನು ದೋಷರಹಿತವಾಗಿ ಆಯೋಜಿಸುವ ಕೇಂದ್ರ ಸರ್ಕಾರವು, ಈ ಅನಿಶ್ಚಿತತೆಯನ್ನು ಕೊನೆಗೊಳಿಸಲು ಮತ್ತು ಪೂರ್ಣ ಖಾಸಗಿ ಕೋಟಾವನ್ನು ಪುನಃಸ್ಥಾಪಿಸಲು ರಾಜತಾಂತ್ರಿಕ ಮಧ್ಯಸ್ಥಿಕೆಯನ್ನು ಕೋರುವಂತೆ ಪತ್ರವು ಆಗ್ರಹಿಸಿದೆ.
ಯಾವುದೇ ಅಡೆತಡೆ ಅಥವಾ ಅನಿಶ್ಚಿತತೆಯಿಲ್ಲದೆ ಸುಗಮ ಯಾತ್ರೆಗೆ ಅನುಕೂಲವಾಗುವಂತೆ ಪ್ರಯಾಣ ವ್ಯವಸ್ಥೆಗಳನ್ನು ತ್ವರಿತಗೊಳಿಸಬೇಕು ಮತ್ತು ಯಾತ್ರೆಗೆ ಅಡ್ಡಿಯುಂಟಾದರೆ, ಅದು ಹಜ್ ನಿರ್ವಹಣಾ ವ್ಯವಸ್ಥೆಯಲ್ಲಿ ಯುಗಯುಗಗಳಿಂದ ಬಂದಿರುವ ನಮ್ಮ ದೇಶದ ಒಳ್ಳೆಯ ಹೆಸರಿಗೆ ಪರಿಣಾಮ ಬೀರಲಿದೆ ಎಂದು ಪತ್ರದಲ್ಲಿ ಪ್ರಧಾನಿಯವರ ಗಮನ ಸೆಳೆಯಲಾಗಿದೆ.
ಸಾವಿರಾರು ಕುಟುಂಬಗಳಿಗೆ ಆರ್ಥಿಕ ಮತ್ತು ಭಾವನಾತ್ಮಕ ನಷ್ಟವನ್ನುಂಟುಮಾಡುತ್ತಿರುವ ಈ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮಧ್ಯಪ್ರವೇಶಿಸುವಂತೆ ಹಾಗೂ ಭಾರತದಿಂದ ಹಜ್ ಯಾತ್ರೆಯನ್ನು ಹೆಚ್ಚು ವ್ಯವಸ್ಥಿತವಾಗಿಸಲು ವ್ಯವಸ್ಥೆ ಮಾಡಬೇಕೆಂದು ಪತ್ರದಲ್ಲಿ ವಿನಂತಿಸಲಾಗಿದೆ.
ಖಾಸಗಿ ಗ್ರೂಪುಗಳು ಈಗಾಗಲೇ ಪ್ರಯಾಣಕ್ಕೆ ಸಂಬಂಧಿಸಿದ ವಿವಿಧ ಮರುಪಾವತಿಸಲಾಗದ ವಹಿವಾಟುಗಳನ್ನು ಮಾಡಿರುವುದರಿಂದ ಇದು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಹೇತುವಾಗಲಿದೆ. ಭಾರತವನ್ನು ‘ರೋಡ್ ಟು ಮಕ್ಕಾ’ ಯೋಜನೆಯಲ್ಲಿ ಸೇರಿಸಲು ಮಧ್ಯಪ್ರವೇಶಿಸುವಂತೆ ಕೋರಿ ಗ್ರ್ಯಾಂಡ್ ಮುಫ್ತಿ ಈ ಹಿಂದೆ ಪ್ರಧಾನಿ ಮತ್ತು ಸೌದಿ ಸರ್ಕಾರಕ್ಕೆ ಪತ್ರ ಬರೆದಿದ್ದರು.