janadhvani

Kannada Online News Paper

ಪ್ರಯಾಣಿಕರಿಂದ 2 ರೂ. ಹೆಚ್ಚು ಪ್ರಯಾಣ ಶುಲ್ಕ ಪಡೆದ ಕೆಎಸ್‌ಆರ್‌ಟಿಸಿ- 5000 ರೂ. ದಂಡ

ಸೇವಾನೂನ್ಯತೆ ಮತ್ತು ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿದ ಆರೋಪದ ಮೇಲೆ ಆಯೋಗವು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ದಂಡ ವಿಧಿಸಿದೆ

ಮಂಡ್ಯ: ಮಂಡ್ಯದಿಂದ ಮದ್ದೂರಿಗೆ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಂದ 2 ರೂ. ಹೆಚ್ಚು ಪ್ರಯಾಣ ಶುಲ್ಕ ಪಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ(ಕೆಎಸ್‌ಆರ್‌ಟಿಸಿ) ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 5000 ರೂ. ದಂಡ ವಿಧಿಸಿದೆ.

ಸೇವಾನೂನ್ಯತೆ ಮತ್ತು ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿದ ಆರೋಪದ ಮೇಲೆ ಆಯೋಗವು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ದಂಡ ವಿಧಿಸಿದ್ದು, ಈ ಹಣವನ್ನು ಪ್ರಯಾಣಿಕರೂ ಆದ ವಕೀಲ ಎನ್.ಚನ್ನಬಸಪ್ಪ ಅವರಿಗೆ ಪಾವತಿಸುವಂತೆ ಜ.21ರಂದು ಆದೇಶಿಸಿದೆ. ಒಂದೊಮ್ಮೆ ದಂಡ ಮೊತ್ತವನ್ನು ಪಾವತಿಸಲು ತಡವಾದರೆ ಶೇ.10ರಷ್ಟು ಬಡ್ಡಿ ದರದಲ್ಲಿ ದಂಡ ಪಾವಿಸುವಂತೆಯೂ ಆದೇಶ ನೀಡಿದೆ.

ಘಟನೆ?
ಮಂಡ್ಯದ ವಕೀಲ ಎನ್.ಚನ್ನಬಸಪ್ಪ ಅವರು 2022ರ ಜೂ.21ರಂದು ಬೆಳಗ್ಗೆ ಕಾರ್ಯನಿಮಿತ್ತ ಮಂಡ್ಯದಿಂದ ಮದ್ದೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದರು. ಆ ಸಂದರ್ಭದಲ್ಲಿ ಬಸ್ ನಿರ್ವಾಹಕ ಬಿ.ಸಿ.ನಾಗರಾಜು 25 ರೂ. ಪಡೆದು ಟಿಕೆಟ್ ನೀಡಿದ್ದರು. ಆದರೆ ಕೆಲಸ ಮುಗಿಸಿ ಅದೇ ದಿನ ಮದ್ದೂರಿನಿಂದ ಮಂಡ್ಯಗೆ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ ಚನ್ನಬಸಪ್ಪ ಅವರಿಗೆ ಆ ಬಸ್‌ನ ನಿರ್ವಾಹಕ 23 ರೂ. ಪ್ರಯಾಣದ ದರದ ಟಿಕೆಟ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಕೀಲ ಚನ್ನಬಸಪ್ಪ ಅವರು ಕೆಎಸ್‌ಆರ್‌ಟಿಸಿ ಸಂಸ್ಥೆಯು 2 ರೂ.ಗಳನ್ನು ಅಕ್ರಮವಾಗಿ ಪಡೆದು ಅನುಚಿತ ವ್ಯಾಪಾರ ನಡೆಸಿದೆ. ಈ ಮೂಲಕ ಸೇವಾ ನ್ಯೂನತೆ ಎಸಗಿದೆ ಎಂದು ಆರೋಪಿಸಿ ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ 2022ರ ಜು.11ರಂದು ದೂರು ದಾಖಲಿಸಿದ್ದರು. ಜತೆಗೆ ಕರ್ನಾಟಕ ಸರಕಾರ, ಕೆಎಸ್‌ಆರ್‌ಟಿಸಿ ಸಂಸ್ಥೆ, ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೋ ಮ್ಯಾನೇಜರ್ ಮತ್ತು ನಿರ್ವಾಹಕ ಬಿ.ಸಿ.ನಾಗರಾಜು ಅವರು ಪ್ರತಿವಾದಿಗಳನ್ನಾಗಿ ಮಾಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಮೇಲುನೋಟಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆಯು ಅನುಚಿತ ವ್ಯಾಪಾರ ಪದ್ಧತಿ ನಡೆಸಿ, ಸೇವಾ ನ್ಯೂನತೆ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಹಕರ ಸಂರಕ್ಷಣಾ ಕಾಯಿದೆ ಸೆಕ್ಷನ್ 35ರ ಪ್ರಕಾರ 5000 ರೂ. ದಂಡ ಮೊತ್ತವನ್ನು ಪ್ರಯಾಣಿಕರಿಗೆ ಪಾವತಿಸುವಂತೆ ಆದೇಶ ನೀಡಿದೆ. ದಂಡ ಮೊತ್ತವನ್ನು ಎಲ್ಲ ಆರೋಪಿತರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಪ್ರಯಾಣಿಕ ಚನ್ನಬಸಪ್ಪ ಅವರಿಗೆ 45 ದಿನಗಳಲ್ಲಿ ಪಾವತಿಸಬೇಕೆಂದು ಸೂಚಿಸಿದರು.

ರೈಲ್ವೆ, ಅಂಚೆ ಇಲಾಖೆಗೂ ದಂಡ ಹಾಕಿಸಿದ್ದರು
ವಕೀಲ ಎನ್.ಚನ್ನಬಸಪ್ಪ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೂಲಕ ಸರಕಾರಿ ಸಂಸ್ಥೆಯೊಂದಕ್ಕೆ ದಂಡ ಹಾಕಿಸಿರುವುದು ಇದೇ ಮೊದಲಲ್ಲ. 2022ರಲ್ಲಿ ರೈಲ್ವೆ ಇಲಾಖೆಗೆ, 2011ರಲ್ಲಿ ಅಂಚೆ ಇಲಾಖೆಗೂ ಆಯೋಗದ ಮೂಲಕ ದಂಡ ಹಾಕಿಸಿ, ಆ ದಂಡ ಮೊತ್ತವನ್ನು ಪಡೆದ ಹೆಗ್ಗಳಿಕೆ ಚನ್ನಬಸಪ್ಪ ಅವರದು.

ಮಂಡ್ಯದಿಂದ ಬೆಂಗಳೂರಿಗೆ ಚನ್ನಬಸಪ್ಪ ಅವರು ಪ್ರಯಾಣಿಸಿದ ರೈಲು 32 ನಿಮಿಷ ತಡವಾಗಿ ಬೆಂಗಳೂರು ತಲುಪಿತ್ತು. ಹೀಗಾಗಿ ಬೆಂಗಳೂರಿನಲ್ಲಿ ತಾವು ಸಂಪರ್ಕಿಸಬೇಕಾದ ಕ್ಲೈಂಟ್ ಅನ್ನು ಭೇಟಿಯಾಗಲು ಆಗಲಿಲ್ಲ. ಇದರಿಂದ ತನಗೆ ನಷ್ಟವಾಗಿದೆ. ಅದನ್ನು ಸೇವಾ ನ್ಯೂನತೆ ಎಸಗಿದ ರೈಲ್ವೆ ಇಲಾಖೆ ಕಟ್ಟಿಕೊಡಬೇಕೆಂದು ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರಕಾರ, ರೈಲ್ವೆ ಇಲಾಖೆ ಮತ್ತು ಇಲಾಖೆಯ ಅಧಿಕಾರಿಗಳನ್ನು ಪ್ರತಿವಾದಿಗಳಾಗಿ ಮಾಡಿದ್ದರು. ಆಗ ಆಯೋಗವು ರೈಲ್ವೆ ಇಲಾಖೆಗೆ 15000 ರೂ. ದಂಡ ವಿಧಿಸಿ, ಅದನ್ನು ಪ್ರಯಾಣಿಕರಿಗೆ ಪಾವತಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ರೈಲ್ವೆ ಇಲಾಖೆಯು ರಾಜ್ಯ ಆಯೋಗಕ್ಕೆ ಮೇಲ್ಮನವಿ ಹೋಗಿತ್ತು. ಆದರೆ ರಾಜ್ಯ ಆಯೋಗವು ಜಿಲ್ಲಾ ಆಯೋಗದ ಆದೇಶವನ್ನು ಎತ್ತಿಹಿಡಿದಿತ್ತು. ಪುನಃ ಇಲಾಖೆಯು ರಾಷ್ಟ್ರೀಯ ಆಯೋಗಕ್ಕೂ ಮೇಲ್ಮನವಿ ಸಲ್ಲಿಸಿತ್ತು. ಅದರೆ ಅಲ್ಲಿ ಜಿಲ್ಲಾ ಮತ್ತು ರಾಜ್ಯ ಆಯೋಗದ ಆದೇಶವನ್ನು ಎತ್ತಿ ಹಿಡಿದು, ಹೆಚ್ಚುವರಿಯಾಗಿ 10000 ರೂ. ದಂಡ ಪಾವತಿಸುವಂತೆ ಆದೇಶಿಸಿತ್ತು. ಇದರಿಂದ ಬಡ್ಡಿ ಮೊತ್ತ ಸೇರಿದಂತೆ ಚನ್ನಬಸಪ್ಪ ಅವರಿಗೆ 50500 ರೂ.ಗಳನ್ನು ದಂಡ ಮೊತ್ತವಾಗಿ ಪಾವತಿಸಿತ್ತು.

ಅಂಚೆ ಇಲಾಖೆಯಿಂದ 9000 ರೂ. ಪರಿಹಾರ
2011ರಲ್ಲಿ ವಕೀಲ ಚನ್ನಬಸಪ್ಪ ಅವರು ಮಂಡ್ಯ ಅಂಚೆ ಕಚೇರಿಯಿಂದ ಹೊಳೆನರಸೀಪುರ ಕೋರ್ಟ್ನ ಬೆಂಚ್‌ ಕ್ಲರ್ಕ್ಗೆ ರಿಜಿಸ್ಟರ್ ಪೋಸ್ಟ್ ಮಾಡಿದ್ದರು. ಆದರೆ, ಈ ಅಂಚೆಯು 16 ದಿನ ತಡವಾಗಿ ವಿಳಾಸ ತಲುಪಿತ್ತು. ಇದನ್ನು ಪ್ರಶ್ನಿಸಿ ಚನ್ನಬಸಪ್ಪ ಅವರು ಸಲ್ಲಿಸಿದ ದೂರಿಗೆ ಸ್ಪಂದಿಸಿದ ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅಂಚೆ ಇಲಾಖೆಗೆ 9000 ರೂ. ದಂಡ ವಿಧಿಸಿತ್ತು.

ಯಾವುದೇ ಸಂಸ್ಥೆಗಳು ಕರ್ತವ್ಯಲೋಪ, ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆ ಎಸಗಬಾರದು. ಇದರಿಂದ ಗ್ರಾಹಕರಿಗೆ ಎಷ್ಟೊಂದು ತೊಂದರೆಯಾಗುತ್ತದೆ. ಹೀಗಾಗಿ ಸಾರ್ವಜನಿಕ ಸಂಸ್ಥೆಗಳಿಂದಾದ ಲೋಪವನ್ನು ಗ್ರಾಹಕರ ಆಯೋಗದಲ್ಲಿ ಪ್ರಶ್ನಿಸುತ್ತಿದ್ದೇನೆ. ಅಂತಹ ಸಂದರ್ಭದಲ್ಲೆಲ್ಲಾ ನನಗೆ ನ್ಯಾಯ ಸಿಕ್ಕಿದೆ. ಇದು ಸಾರ್ವಜನಿಕ ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಎನ್.ಚನ್ನಬಸಪ್ಪ, ವಕೀಲ, ಮಂಡ್ಯ

error: Content is protected !! Not allowed copy content from janadhvani.com